ಜಿಲ್ಲೆಗೆ ಅಗತ್ಯವಾಗಿ ಬೇಕಾಗಿದ್ದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸಿಗಲಿಲ್ಲ, ಬೇಡವಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಸಿಕ್ಕರೂ ಏನೂ ಪ್ರಯೋಜನವಿಲ್ಲ, ಐಐಟಿ ಬದಲಾಗಿ ಭಾರತೀಯ ವೈದ್ಯವಿಜ್ಞಾನ ಸಂಸ್ಥೆ (ಏಮ್ಸ್) ನೀಡಬೇಕು ಎಂದು ಸರ್ಕಾರಗಳ ಮೇಲೆ ಒತ್ತಡ ಹೇರುವುದಕ್ಕೆ ಬಲವಿಲ್ಲ. ಇದು ರಾಯಚೂರು ಜಿಲ್ಲೆಯ ದೌರ್ಭಾಗ್ಯಕ್ಕೆ ಹಿಡಿದ ಕನ್ನಡಿ, ಬಲಿಷ್ಠ ನಾಯಕರ ಕೊರತೆಯಿಂದಾಗಿ ಜಿಲ್ಲೆ ಇಂತಹ ದುಸ್ಥಿತಿ ಅನುಭವಿಸುವಂತಾಗಿದೆ.
ರಾಮಕೃಷ್ಣ ದಾಸರಿ ರಾಯಚೂರು
ರಾಯಚೂರು (ಡಿ.15): ಜಿಲ್ಲೆಗೆ ಅಗತ್ಯವಾಗಿ ಬೇಕಾಗಿದ್ದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸಿಗಲಿಲ್ಲ, ಬೇಡವಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಸಿಕ್ಕರೂ ಏನೂ ಪ್ರಯೋಜನವಿಲ್ಲ, ಐಐಟಿ ಬದಲಾಗಿ ಭಾರತೀಯ ವೈದ್ಯವಿಜ್ಞಾನ ಸಂಸ್ಥೆ (ಏಮ್ಸ್) ನೀಡಬೇಕು ಎಂದು ಸರ್ಕಾರಗಳ ಮೇಲೆ ಒತ್ತಡ ಹೇರುವುದಕ್ಕೆ ಬಲವಿಲ್ಲ. ಇದು ರಾಯಚೂರು ಜಿಲ್ಲೆಯ ದೌರ್ಭಾಗ್ಯಕ್ಕೆ ಹಿಡಿದ ಕನ್ನಡಿ, ಬಲಿಷ್ಠ ನಾಯಕರ ಕೊರತೆಯಿಂದಾಗಿ ಜಿಲ್ಲೆ ಇಂತಹ ದುಸ್ಥಿತಿ ಅನುಭವಿಸುವಂತಾಗಿದೆ.
ಡಾ. ನಂಜುಂಡಪ್ಪ ಶಿಫಾರಸಿನಂತೆ ಹಿಂದುಳಿದ ಜಿಲ್ಲೆ ರಾಯಚೂರಿನಲ್ಲಿ ಐಐಟಿ ಸ್ಥಾಪಿಸುವುದನ್ನು ತಪ್ಪಿಸಿ ಪೈಪೋಟಿ ಬಿದ್ದು ದ್ರೋಹ ಬಗೆದಿರುವ ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರಗಳು ಮತ್ತು ಈ ಭಾಗದ ಜನಪ್ರತಿನಿಧಿಗಳು. ಇದೀಗ ಬೇಡವಾದ ಐಐಐಟಿ ನೀಡಿ ಏಮ್ಸ್ ತರುವ ಪ್ರಯತ್ನಕ್ಕೆ ತಣ್ಣೀರು ಎರಚುವ ಹುನ್ನಾರ ಹೂಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಮತ್ತೊಮ್ಮೆ ಸಾಬೀತು:
ರಾಯಚೂರಿನಲ್ಲಿ ಸ್ಥಾಪಿಸಬೇಕಾಗಿದ್ದ ಐಐಟಿಯನ್ನು ಕಿತ್ತುಕೊಂಡು ಧಾರವಾಡಕ್ಕೆ ಶಿಫ್ಟ್ ಮಾಡಿಸಿದ ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ರಾಜ್ಯ ನಾಯಕರು ಎಲ್ಲಿಲ್ಲದ ಶ್ರಮಪಟ್ಟು ಕಡೆಗೂ ಯಶಸ್ಸು ಕಂಡರು. ಬಿಜೆಪಿ ಆಡಳಿತದಲ್ಲಿದ್ದಾಗ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ರಾಯಚೂರಿಗೆ ಐಐಟಿ ನೀಡುವುದರ ಬಗ್ಗೆ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಒಪ್ಪಿಗೆ ಸೂಚಿಸಿದ್ದರು ವಿಪರ್ಯಾಸವೆಂದರೇ ಜಿಲ್ಲೆಗೆ ಐಐಟಿ ಕೈತಪ್ಪಲು ಅವರ ಮುಖ್ಯವಾಗಿ ಶ್ರಮಿಸಿದ್ದಾರೆ.
ಉಭಯ ಸರ್ಕಾರಗಳ ಮೇಲೆ ಒತ್ತಡ ಹೇರುವಲ್ಲಿ ಸ್ಥಳೀಯ ಸಂಸದರು, ಶಾಸಕರು, ಎಂಎಲ್ಸಿಗಳು (ಎಲ್ಲಾ ಪಕ್ಷದವರು ) ಸಂಪೂರ್ಣವಾಗಿ ವಿಫಲವಾಗಿದ್ದರು ಅದರ ಜೊತೆಗೆ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಲೇ ಐಐಟಿ ಕೈತಪ್ಪಿತು. ಇದೀಗ ಖಾಸಗಿ ಸಹಭಾಗೀತ್ವದ ಐಐಐಟಿ ಸಂಸ್ಥೆಯು ಜಿಲ್ಲೆಗೆ ಮಂಜೂರು ಮಾಡಿಸುವುದರ ಮೂಲಕ ಮತ್ತೊಮ್ಮೆ ಬಲಿಷ್ಠ ನಾಯಕತ್ವದ ಕೊರತೆಯನ್ನು ಮತ್ತೊಮ್ಮೆ ಸಾಬೀತು ಮಾಡಿದ್ದು, ಇಂದು ಐಐಐಟಿ ನೀಡಿದ ಸರ್ಕಾರ ಇದರ ನೆಪವೊಡ್ಡಿ ಏಮ್ಸ್ ಕೂಗಿನ ಸದ್ದನ್ನಡಗಿಸುವ ಕುತಂತ್ರವು ಮೇಲ್ನೋಟಕ್ಕೆ ಎದ್ದುಕಾಣುತ್ತಿದ್ದು, ಐಐಐಟಿ ನೀಡುವುದರ ಮೂಲಕ ಐಐಟಿ ವಿಷಯದಲ್ಲಿ ಜಿಲ್ಲೆ ಜನರ ಮಾಡಿದ ದ್ರೋಹಕ್ಕೆ ಪ್ರತಿಫಲವನ್ನು ಈ ರೀತಿಯಾಗಿ ನೀಡುವುದರ ಮೂಲಕ ಏಮ್ಸ್ ಕನಸಿಗೂ ತಣ್ಣೀರೆರಚುವ ಹುನ್ನಾರಕ್ಕೆ ಸಾರ್ವಜನಿಕರು ಹೆದರಿದ್ದಾರೆ.
ಭಾರತೀಯ ವೈದ್ಯವಿಜ್ಞಾನ ಸಂಸ್ಥೆ (ಏಮ್ಸ್) ಜಿಲ್ಲೆಯಲ್ಲಿ ಆರಂಭಗೊಂಡಲ್ಲಿ ಐಐಟಿಯಿಂದ ಕಳೆದುಕೊಂಡ ಅಭಿವೃದ್ಧಿಯ ಕೆಲಸಗಳನ್ನು ಪಡೆಯುವುದರ ಜೊತೆಗೆ ಜಿಲ್ಲೆಯ ಮುಖ್ಯವಾಗಿ ಹೈಕ ಭಾಗದ ಬಡ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡಬಹುದು ಎಂಬ ಸದುದ್ದೇಶದಿಂದ ಏಮ್ಸ್ ಕನಸಿನ ಕೂಸು ಜನ್ಮತಾಳಿದ್ದು, ಐಐಟಿ ಪರ್ಯಾಯದಂತೆ ಐಐಐಟಿ ನೀಡಿರುವ ಕೇಂದ್ರದ ನಿರ್ಧಾರಕ್ಕೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಇದರ ಬೆನ್ನಹಿಂದೆಯೇ ಏಮ್ಸ್ನ್ನು ಜಿಲ್ಲೆಗೆ ಮಂಜೂರಾತಿಗಾಗಿ ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಸಂಘಟಿತರಾಗಿ ಐಐಟಿಯಂತೆ ಐತಿಹಾಸಿಕ ಚಳವಳಿಯನ್ನು ರೂಪಿಸುವ ಚಿಂತನೆಯಲ್ಲಿ ಮಗ್ನರಾಗಿದ್ದಾರೆ.
ಐಐಟಿ ವಿಚಾರದಲ್ಲಿ ಜಿಲ್ಲೆಗೆ ಆಗಿರುವಂತಹ ಅನ್ಯಾಯವನ್ನು ಸರಿಪಡಿಸುವುದಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಿ ಐಐಐಟಿಯನ್ನು ಮಂಜೂರು ಮಾಡಿಸಲಾಗಿದೆ. ಆ ಮೂಲಕ ಆಗಿರುವ ಅನ್ಯಾಯದಲ್ಲಿ ಸ್ವಲ್ಪ ಮಟ್ಟಿಗೆಯಾದರೂ ಸರಿಪಡಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದೇವೆ.
-ಕೆ. ಶಿವನಗೌಡ ನಾಯಕ, ದೇವದುರ್ಗ ಶಾಸಕ
ಡಾ.ಡಿ.ಎಂ.ನಂಜುಂಡಪ್ಪ ಆಶಯದ ವಿರುದ್ಧ ಹೈ-ಕ ಜನರ ಐತಿಹಾಸಿಕ ಆಗ್ರಹದ ಆವೇದನೆಗೆ ದ್ರೋಹಬಗೆದ ರಾಜ್ಯ,ಕೇಂದ್ರ ಸರ್ಕಾರಗಳು ಏಮ್ಸ್ ಅನ್ನು ಕಬಳಿಸಲು ಐಐಐಟಿಯನ್ನು ನೀಡಿದೆ. ಐಐಟಿಗೆ ಇದು ಪರಿಹಾರವೂ ಅಲ್ಲ, ಪರ್ಯಾಯವೂ ಸಲ್ಲ.
- ಅಂಬಣ್ಣ ಅರೋಲಿಕರ್, ಹೋರಾಟಗಾರ
