ನಿರಾಶ್ರಿತರಾದ ಕೊಡಗು ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌ ನಿರ್ಮಾಣ ಮಾಡಿಕೊಡುವ ಪ್ರಸ್ತಾವನೆ ಕೈಬಿಡಲಾಗಿದ್ದು ಇದರ ಬದಲಾಗಿ ತಿಂಗಳಿಗೆ 10 ಸಾವಿರ ರು.ಗಳಂತೆ ಪರಿಹಾರ ಧನ ನೀಡಲಾಗುವುದು ಎಂದು ಸಚಿವ ಯುಟಿ ಖಾದರ್ ಹೇಳಿದ್ದಾರೆ. 

ಬೆಂಗಳೂರು : ಪ್ರವಾಹದಿಂದ ಮನೆ ಕಳೆದುಕೊಂಡು ನಿರಾಶ್ರಿತರಾದ ಕೊಡಗು ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌ ನಿರ್ಮಾಣ ಮಾಡಿಕೊಡುವ ಪ್ರಸ್ತಾವನೆ ಕೈಬಿಡಲಾಗಿದೆ. ಬದಲಿಗೆ ನಿರಾಶ್ರಿತರಿಗೆ ತಿಂಗಳಿಗೆ 10 ಸಾವಿರ ರು.ಗಳಂತೆ ಪರಿಹಾರ ಧನ ನೀಡಲಾಗುವುದು ಎಂದು ವಸತಿ ಸಚಿವ ಯು.ಟಿ.ಖಾದರ್‌ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಹಾಮಳೆಗೆ 700ರಿಂದ 800 ಮಂದಿ ನಿರಾಶ್ರಿತರನ್ನು ಗುರುತಿಸಲಾಗಿದೆ. ಅವರೆಲ್ಲರಿಗೆ ಜಿಲ್ಲಾಧಿಕಾರಿಯವರು ಗುರುತಿಸಿದ ಸ್ಥಳಗಳಲ್ಲಿ ತಲಾ 6 ಲಕ್ಷ ರು.ಗಳ ವೆಚ್ಚದಲ್ಲಿ ಮಾದರಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಅಲ್ಲಿಯವರೆಗೆ ಮನೆ ಕಳೆದುಕೊಂಡವರು ಬಾಡಿಗೆ ಮನೆಯಲ್ಲಿ ಇರಲು ಅನುಕೂಲವಾಗುವಂತೆ ಮಾಸಿಕ 10 ಸಾವಿರ ರು.ಗಳನ್ನು ನೀಡಲು ನಿರ್ಧರಿಸಲಾಗಿದೆ. ಆದಷ್ಟುಶೀಘ್ರವೇ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮನೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ನಿವೇಶನ ಇದ್ದವರು ತಾವೇ ಮನೆಗಳನ್ನು ಕಟ್ಟಿಕೊಳ್ಳಲು ಅನುಕೂಲ ಕಲ್ಪಿಸಲಿದ್ದು, ಅವರಿಗೆ ಸರ್ಕಾರ 6 ಲಕ್ಷ ರು.ಗಳ ಸಹಾಯಧನ ನೀಡಲಿದೆ. ಮಾದರಿ ಮನೆಗಳನ್ನು ನಿರ್ಮಿಸಲು ಗೃಹ ಮಂಡಳಿ ಹಾಗೂ ಖಾಸಗಿ ಸಂಸ್ಥೆಯೊಂದಕ್ಕೆ ಟೆಂಡರ್‌ ನೀಡಲಾಗುವುದು. ಮೊದಲಿಗೆ ಈ ಎರಡು ಸಂಸ್ಥೆಗಳು ನಿರ್ಮಿಸುವ ಮಾದರಿ ಮನೆಗಳನ್ನು ಸಾರ್ವಜನಿಕರ ವೀಕ್ಷಣೆಗೂ ಅವಕಾಶ ನೀಡಲಾಗುವುದು. ಸಾರ್ವಜನಿಕರು ಒಪ್ಪುವ ಮನೆಯ ಮಾದರಿಯಂತೆ ಮನೆಗಳನ್ನು ನಿರ್ಮಿಸಿ ನಿರಾಶ್ರಿತರಿಗೆ ವಿತರಿಸಲಾಗುವುದು ಎಂದು ತಿಳಿಸಿದರು.