ಅತೃಪ್ತರ ಬೆಂಬಲದೊಂದಿಗೆ ಮತ್ತೆ ಸರ್ಕಾರ ರಚಿಸುತ್ತಾ ಬಿಜೆಪಿ..?
ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಹಲವರು ಮುಖಂಡರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇದೇ ವೇಳೆ ಬಿಜೆಪಿಯೊಂದಿಗೆ ಯಾವ ಅತೃಪ್ತರು ಸಂಪರ್ಕದಲ್ಲಿ ಇಲ್ಲ ಎಂದು ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿ : ಕಾಂಗ್ರೆಸ್ನ ಯಾವುದೇ ಅತೃಪ್ತ ಶಾಸಕರು ನಮ್ಮ ಸಂಪರ್ಕದಲ್ಲಿಲ್ಲ. ನಾನು ಕೂಡ ಯಾರನ್ನೂ ಸಂಪರ್ಕಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಯಾವುದೇ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ಮಾಡುವುದಿಲ್ಲ. ಕಾಂಗ್ರೆಸ್ನ ಒಳಬೇಗುದಿ ಎಲ್ಲಿಯವರೆಗೆ ಹೋಗಿ ಮುಟ್ಟುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಸದ್ಯದ ಸ್ಥಿತಿಯಲ್ಲಿ ನಾವು ಸರ್ಕಾರ ರಚಿಸುವ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ. ನಾವು ಪ್ರತಿಪಕ್ಷದಲ್ಲೇ ಇದ್ದುಕೊಂಡು ಕೆಲಸ ಮಾಡುತ್ತೇವೆ. ಕಾಂಗ್ರೆಸ್ನಲ್ಲಿನ ಗೊಂದಲದ ಬಗ್ಗೆ ನಮ್ಮ ಕಡೆ ಬೊಟ್ಟುಮಾಡಿ ತೋರಿಸಿದರೆ ನಾವು ಏಕೆ ತಲೆಕೆಡಿಸಿಕೊಳ್ಳಬೇಕು ಎಂದು ಪ್ರಶ್ನಿಸಿದರು.
ಗುಡ್ ಬೈ 2018: ಕರ್ನಾಟಕ ಕಂಡ ರಾಜಕಾರಣದ 5 ಪಲ್ಲಟಗಳುಶಾಸಕ ಉಮೇಶ ಕತ್ತಿ ಜೊತೆಗೆ ಎಲ್ಲರೂ ಸಂಪರ್ಕದಲ್ಲಿರುತ್ತಾರೆ. ಹೊಸ ಸರ್ಕಾರ ರಚನೆಯ ಯಾವುದೇ ಪ್ರಸ್ತಾವ ನಮ್ಮ ಮುಂದೆ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ಪ್ರಬಲ ಅಭ್ಯರ್ಥಿ ಇಲ್ಲ: ಇದೇ ವೇಳೆ, ಪ್ರಧಾನಿ ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ ಪ್ರಬಲ ಅಭ್ಯರ್ಥಿಯೇ ಇಲ್ಲ. ಹಾಗಾಗಿ ಈ ಬಾರಿಯೂ ಮತ್ತೆ ಮೋದಿ ಅವರನ್ನೇ ಪ್ರಧಾನಿಯನ್ನಾಗಿಸಲು ದೇಶದ ಜನ ಸಿದ್ಧರಾಗಿದ್ದಾರೆ. ನೂರಕ್ಕೆ ನೂರರಷ್ಟುದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲಿದೆ.
‘ಯಾವುದೇ ಮೈತ್ರಿಯಾದರೂ 2019ರಲ್ಲಿ ಕಾಂಗ್ರೆಸ್ ಗೆಲುವು ಖಚಿತ’ದೇಶದ ಜನ ಕುಂತಲ್ಲಿ, ನಿಂತಲ್ಲಿ ಮೋದಿ ಅವರೇ ಪ್ರಧಾನಿಯಾಗುತ್ತಾರೆ ಎಂದು ಮಾತನಾಡುತ್ತಿದ್ದಾರೆ. ದೇಶದ ಭವಿಷ್ಯದ ದೃಷ್ಟಿಯಿಂದ ಮೋದಿ ಅವರೇ ಪ್ರಧಾನಿಯಾಗಬೇಕು ಎನ್ನುವುದು ಎಲ್ಲರ ಅಪೇಕ್ಷೆ. ನಿಶ್ಚಿತವಾಗಿ ಬಿಜೆಪಿಗೆ ಸ್ಪಷ್ಟಬಹುಮತ ದೊರೆಯಲಿದೆ. ಏಪ್ರಿಲ್ ಎರಡನೇ ವಾರದಲ್ಲಿ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ನಾವು ನಮ್ಮ ಪಕ್ಷವನ್ನು ಬಲಪಡಿಸುವ ಜೊತೆಗೆ ರಾಜ್ಯದಲ್ಲಿ ಸದ್ಯ ಪ್ರತಿಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದರು.