ಮುಂದುವರೆದ ಖಾವಿ, ಖಾದಿ ವಾಕ್ಸಮರನಿರಂಜನಾನಂದ ಪುರಿ ಸ್ವಾಮೀಜಿ ವಿರುದ್ದ ವಿಶ್ವನಾಥ್ ಗರಂವೈಯಕ್ತಿಕ ಪ್ರತಿಷ್ಠ ಬಿಡುವಂತೆ ವಿಶ್ವನಾಥ್ ಗೆ ಟಾಂಗ್ಸಮಾಜದ ಪರ ಧ್ವನಿ ಎತ್ತುವುದನ್ನು ನಿಲ್ಲಿಸುವುದಿಲ್ಲಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ

ದಾವಣಗೆರೆ(ಜೂ.30): ಮಾಜಿ ಸಿಎಂ ಸಿದ್ದರಾಮಯ್ಯ ಪರ ಮಾತನಾಡುತ್ತಿರುವ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ತಮಗೆ ಅದೇ ಸಿದ್ದರಾಮಯ್ಯ ಅವರಿಂದ ಅನ್ಯಾಯವಾದಾಗ ಧ್ವನಿ ಎತ್ತಲಿಲ್ಲ ಎಂದು ಜೆಡಿಎಸ್ ನಾಯಕ ಹೆಚ್.ವಿಶ್ವನಾಥ್ ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ನಿರಂಜನಾನಂದ ಪುರಿ ಸ್ವಾಮೀಜಿ, ವೈಯಕ್ತಿಕ ಪ್ರತಿಷ್ಠೆ ಬದಿಗಿರಿಸುವಂತೆ ವಿಶ್ವನಾಥ್ ಅವರಿಗೆ ಸಲಹೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ನಾನು ನನ್ನ ಸಮಾಜದ ಪರ ಇದ್ದು, ಹರಿಹರ ಬ್ರಹ್ಮ ಬಂದರೂ ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದಿರುವ ನಿರಂಜನಾನಂದ ಪುರಿ ಸ್ವಾಮೀಜಿ, ವಿಶ್ವನಾಥ್ ಕೂಡ ನಮ್ಮ ಸಮಾಜದ ಹಿರಿಯ ನಾಯಕರಾಗಿದ್ದು ಅವರಿಗೆ ತೊಂದರೆಯಾದಾಗಲೂ ತಾವು ಬೆಂಬಲಕ್ಕೆ ನಿಂತಿದ್ದಾಗಿ ತಿಳಿಸಿದ್ದಾರೆ.

ವಿಶ್ವನಾಥ್ ಅವರ ಪರಿಸ್ಥಿತಿಯನ್ನು ಲೇವಡಿ ಮಾಡಿರುವ ನಿರಂಜನಾನಂದ ಪುರಿ ಸ್ವಾಮೀಜಿ, ಆನೆ ಕೆರೆಯಲ್ಲಿ ಸ್ನಾನ ಮಾಡುವಾಗ ತಲೆ ಮೇಲೆ ದಡದ ಮಣ್ಣನ್ನು ಹಾಕಿಕೊಳ್ಳುವಂತೆ ವಿಶ್ವನಾಥ್ ಕೂಡ ತಮ್ಮ ತಲೆ ಮೇಲೆ ಮಣ್ಣು ಹಾಕಿಕೊಂಡು ಸಮಾಜ ಮತ್ತು ಮಠದ ಮೇಲೆ ಆರೋಪ ಹೊರಿಸುವುದು ಸರಿಯಲ್ಲ ಎಂದಿದ್ದಾರೆ. ವಿಶ್ವನಾಥ್ ನಮ್ಮ ಸಮಾಜದ ಹಿರಿಯ ನಾಯಕರಾಗಿದ್ದು, ಅವರಿಗೆ ಮಾರ್ಗದರ್ಶನ ಮಾಡುವಷ್ಟು ತಾವು ದೊಡ್ಡವರಲ್ಲ ಎಂದು ಅವರು ನುಡಿದಿದ್ದಾರೆ.

ಒಂದು ಕಾಲದಲ್ಲಿ ದೇವೆಗೌಡರನ್ನು ಗಟಸರ್ಪ ಎಂದಿದ್ದ ವಿಶ್ವನಾಥ್, ಈಗ ಅದೇ ಸರ್ಪದ ಆಶ್ರಯದಲ್ಲಿರುವುದೇಕೆ ಎಂದು ಪ್ರಶ್ನಿಸಿರುವ ನಿರಂಜನಾನಂದ ಪುರಿ ಸ್ವಾಮೀಜಿ, ವಿಶ್ವನಾಥ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಕೈ ಬೀಡಬೇಡಿ ಎಂದು ತಾವು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡಿದ್ದಾಗಿ ಸ್ಪಷ್ಟಪಡಿಸಿದರು.

ಇದೇ ವೇಳೆ ಮಠವನ್ನು ವಿಶ್ವನಾಥ್ ಕಟ್ಟಿಲ್ಲ ಬದಲಿಗೆ ಇಡೀ ಸಮಾಜ ಕನಕ ಗುರುಪೀಠವನ್ನು ಸ್ಥಾಪಿಸಿದೆ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದಿರುವ ನಿರಂಜನಾನಂದ ಪುರಿ ಸ್ವಾಮೀಜಿ, ಒಂದು ವೇಳೆ ಮಠವನ್ನು ಟೀಕಿಸಿ ಅವರ ರಾಜಕೀಯ ಬೇಳೆ ಬೆಯುವುದಾದರೆ ತಮಗೆ ಯಾವುದೇ ಅಭ್ಯಂತರವಿಲ್ಲ ಎಂದು ಕಿಡಿಕಾರಿದ್ದಾರೆ.