ಭಾರತ ಯುದ್ಧಕ್ಕೆ ಸದಾ ಸನ್ನದ್ಧವಾಗಿದೆ. ಆದರೆ ಇದರಿಂದಾಗಿ ಗಡಿ ಪ್ರದೇಶದಲ್ಲಿರುವ ನಾಗರಿಕರ ಜೀವ ಹಾನಿಯಾಗುತ್ತದೆ
ನವದೆಹಲಿ(ಜ.4): ಗಡಿ ನಿಯಂತ್ರಣ ರೇಖೆಯ ಆಚೆ ಇರುವ ಉಗ್ರ ತರಬೇತಿ ಕೇಂದ್ರಗಳ ಮೇಲೆ ದಾಳಿ ಮಾಡುವ ಅವಕಾಶ ಮುಕ್ತವಾಗಿ ಇರಿಸಿಕೊಂಡಿದೆ. ಭೂಸೇನೆ ಇನ್ನಷ್ಟು ಸರ್ಜಿಕಲ್ ದಾಳಿ ನಡೆಸಲು ಹಿಂಜರಿಯುವುದಿಲ್ಲ ಎಂದು ಭೂಸೇನೆಯ ನೂತನ ಮುಖ್ಯಸ್ಥ ಜ.ಬಿಪಿನ್ ರಾವತ್ ಹೇಳಿದ್ದಾರೆ. ಸೆ.29ರಂದು ನಡೆಸಿದ ಸರ್ಜಿಕಲ್ ದಾಳಿ ಯೋಜಿತವಾಗಿಯೇ ನಡೆಸಲಾಗಿತ್ತು. ಅದರ ನೇತೃತ್ವವನ್ನು ತಾವೇ ವಹಿಸಿಕೊಂಡದ್ದು. 2 ಕಿಮೀ ದೂರದ ವರೆಗೆ ದೇಶದ ಸೈನಿಕರು ಗಡಿ ನಿಯಂತ್ರಣ ರೇಖೆ ದಾಟಿ ಮುಂದೊತ್ತಿ ಹೋಗಿದ್ದರು ಎಂದು ರಾವತ್ ಹೇಳಿದ್ದಾರೆ. ಅದರ ಸಂಪೂರ್ಣ ಯಶಸ್ಸು ನಿಕಟ ಪೂರ್ವ ಭೂಸೇನಾ ಮುಖ್ಯಸ್ಥರಿಗೆ ಸೇರಬೇಕಾದದ್ದು ಎಂದು ಹೇಳಿದ್ದಾರೆ.
‘ಎನ್ಡಿಟಿವಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಭಾರತ ಯುದ್ಧಕ್ಕೆ ಸದಾ ಸನ್ನದ್ಧವಾಗಿದೆ. ಆದರೆ ಇದರಿಂದಾಗಿ ಗಡಿ ಪ್ರದೇಶದಲ್ಲಿರುವ ನಾಗರಿಕರ ಜೀವ ಹಾನಿಯಾಗುತ್ತದೆ ಎಂದು ಹೇಳಿದ್ದಾರೆ. ಭೂಸೇನೆಗೆ ಪ್ರತ್ಯೇಕವಾಗಿ ವಾಯುಯಾನ ಘಟಕ ರೂಪಿಸಬೇಕೆಂದು ಯೋಜನೆ ಹೊಂದಿದ್ದೇವೆ. ಅದರಲ್ಲಿ ಹೆಲಿಕಾಪ್ಟರ್ಗಳು ಮತ್ತು ಇತರ ವಿಮಾನಗಳನ್ನು ಹೊಂದಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.ಇದರ ಜತೆಗೆ ಮದ್ದುಗುಂಡುಗಳ ಶೇಖರಣಾ ಕೇಂದ್ರಗಳನ್ನು ಮತ್ತಷ್ಟು ಆಧುನೀಕರಣಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
