ಕ್ರಿಕೆಟ್ ಕೋಚ್ ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್..!
ಆದಿತ್ಯನ ತಂದೆ ಸಂಗಮ್ ತಮ್ಮ ಮಗನಿಗೆ ಅವಕಾಶ ನೀಡಿ ಎಂದು ಬೇಡಿಕೆಯಿಟ್ಟಿದ್ದರು. ಆದರೆ ನಾನು ಒಪ್ಪಿರಲಿಲ್ಲ. ಹೀಗಾಗಿ ಅಕಾಡೆಮಿ ಮೇಲೆ ಕೆಟ್ಟ ಹೆಸರು ತರಲು ಸಂಚು ನಡೆಸಿದ್ದಾರೆಂದು ರವಿ ಆರೋಪಿಸಿದ್ದಾರೆ.
ಬೆಂಗಳೂರು(ಜ.31): ನಿರೀಕ್ಷೆಯಂತೆ ರನ್'ಗಳಿಸಿಲ್ಲ ಎಂಬ ಕಾರಣಕ್ಕೆ ಬಾಲಕನ ಮೇಲೆ ಕೋಚ್ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅಕಾಡಮಿಗೆ ಕೆಟ್ಟ ಹೆಸರು ತರಲು ಈ ರೀತಿ ಸುಳ್ಳುಸುದ್ದಿ ಹಬ್ಬಿಸಲಾಗಿದೆ ಎಂದು ಬಸವನಗುಡಿ ಕ್ರಿಕೆಟ್ ಅಕಾಡೆಮಿಯ ಬಿ.ಕೆ. ರವಿ ತಿಳಿಸಿದ್ದಾರೆ.
ಖಾಸಗಿ ಟಿ 20 ಪಂದ್ಯಾವಳಿಯಲ್ಲಿ ನಿಗದಿತ ರನ್ ಗಳಿಸದ್ದಕ್ಕೆ, ಕೋಚ್ ರಮಣ ಬಾಲಕನ ಎದೆ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರತರನಾದ ಹಲ್ಲೆ ನಡೆಸಿದ್ದಾರೆ ಎಂದು ಬಾಲಕನ ಪೋಷಕರು ದೂರಿದ್ದರು. ಈ ಕುರಿತಂತೆ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಸವನಗುಡಿ ಕ್ರಿಕೆಟ್ ಅಕಾಡೆಮಿಯ ರವಿ, ಬಾಲಕನ ಪೋಷಕರು ತಮ್ಮ ಮಗನನ್ನು KSCA ವಲಯ ಮಟ್ಟದ ಟೂರ್ನಿಗಳಿಗೆ ಆಯ್ಕೆ ಮಾಡುವಂತೆ ನನಗೆ ಮೆಸೇಜ್ ಮಾಡಿದ್ದರು. ಮೊದಲನೆಯದಾಗಿ ನಾನು KSCA ಮ್ಯಾನೇಜಿಂಗ್ ಕಮಿಟಿಯಲ್ಲಿಲ್ಲ. ನಾನು ಸರ್ಕಾರಿ ನೌಕರ ಹಾಗೂ ಅಂಪೈರ್ ಆಗಿ ಕೂಡಾ ಕಾರ್ಯ ನಿರ್ವಹಿಸುತ್ತೇನೆ.
ಆದಿತ್ಯನ ತಂದೆ ಸಂಗಮ್ ತಮ್ಮ ಮಗನಿಗೆ ಅವಕಾಶ ನೀಡಿ ಎಂದು ಬೇಡಿಕೆಯಿಟ್ಟಿದ್ದರು. ಆದರೆ ನಾನು ಒಪ್ಪಿರಲಿಲ್ಲ. ಹೀಗಾಗಿ ಅಕಾಡೆಮಿ ಮೇಲೆ ಕೆಟ್ಟ ಹೆಸರು ತರಲು ಸಂಚು ನಡೆಸಿದ್ದಾರೆಂದು ರವಿ ಆರೋಪಿಸಿದ್ದಾರೆ.