ಈ ಕುರಿತು ರಾಜ್ಯಕ್ಕೆ ಸಂಬಂಧಿಸಿದ ಸಮಸ್ತ ನಾಯಕರ ಅಭಿಪ್ರಾಯ ಸಂಗ್ರಹ ಮಾಡಿದ ನಂತರ ವೇಣುಗೋಪಾಲ್‌ ಅವರು ವರದಿಯೊಂದನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಸಲ್ಲಿಸಲಿದ್ದು, ಈ ವರದಿ ಆಧರಿಸಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಹೈಕಮಾಂಡ್‌ ಖಚಿತ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದೆ.

ಬೆಂಗಳೂರು (ಮೇ.05): ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ 15 ದಿನದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಒಂದು ಸ್ಪಷ್ಟನಿರ್ಧಾರ ಕೈಗೊಳ್ಳಲಿದೆ.

ಹೀಗಂತ ಹೇಳುವ ಮೂಲಕ ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಾಧ್ಯತೆಯ ಸುಳಿವನ್ನು ನೀಡಿದ್ದಾರೆ. ಇದಕ್ಕೆ ಸಂವಾದಿಯಾಗಿ ನೂತನ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ರಾಜ್ಯ ಕಾಂಗ್ರೆಸ್‌ಗೆ ಸಂಬಂಧಿಸಿದ ಎಲ್ಲಾ ಪ್ರಮುಖ​ರೊಂದಿಗೆ ನಾಲ್ಕು ದಿನಗಳ ಅವಧಿಯ ಸತತ ಸಭೆಯನ್ನು ಮೇ 8 ರಿಂದ ಆರಂಭಿಸಲಿದ್ದು, ಈ ಸಭೆಗಳ ಮುಖ್ಯ ಅಜೆಂಡಾ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೇ ಆಗಿದೆ.

ಈ ಕುರಿತು ರಾಜ್ಯಕ್ಕೆ ಸಂಬಂಧಿಸಿದ ಸಮಸ್ತ ನಾಯಕರ ಅಭಿಪ್ರಾಯ ಸಂಗ್ರಹ ಮಾಡಿದ ನಂತರ ವೇಣುಗೋಪಾಲ್‌ ಅವರು ವರದಿಯೊಂದನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಸಲ್ಲಿಸಲಿದ್ದು, ಈ ವರದಿ ಆಧರಿಸಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಹೈಕಮಾಂಡ್‌ ಖಚಿತ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲೇ ದೆಹಲಿಯಲ್ಲಿ ಸುದ್ದಿಗಾರರಿಗೆ ಖರ್ಗೆ ಅವರು ಈ ಸೂಚನೆ ನೀಡಿದ್ದು, ಬದಲಾವಣೆಗೆ ಸಂಬಂಧಿಸಿದ ಈ ಎಲ್ಲಾ ಪ್ರಕ್ರಿಯೆಗಳು ಬಹುತೇಕ 15 ದಿನದಲ್ಲಿ ಪೂರ್ಣಗೊಳ್ಳುತ್ತದೆ. ಅಕಸ್ಮಾತ್‌ ವಿಳಂಬವಾದರೆ ಈ ಮಾಸಾಂತ್ಯದ ವೇಳೆಗೆ ನಿರ್ಧಾರ ಖಚಿತ ಎಂಬ ಸುಳಿವನ್ನು ನೀಡಿದ್ದಾರೆ. ಹೀಗಾಗಿ, ಮೇ 8ರಿಂದ ನಡೆಯಲಿ ರುವ ನಿರಂತರ ಸಭೆಗಳು, ಹುದ್ದೆಯಲ್ಲಿ ಮುಂದುವರೆಯಲು ಬಯಸಿರುವ ಹಾಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌, ಹುದ್ದೆ ಗಿಟ್ಟಿಸುವ ಪ್ರಬಲ ಪೈಪೋಟಿ ನಡೆಸಿರುವ ಎಸ್‌.ಆರ್‌. ಪಾಟೀಲ್‌, ಡಿ.ಕೆ. ಶಿವಕುಮಾರ್‌, ಎಂ.ಬಿ. ಪಾಟೀಲ, ಕೆ.ಎಚ್‌. ಮುನಿಯಪ್ಪ ಅವರ ಹಣೆ ಬರೆಹ ನಿರ್ಧರಿಸಲಿವೆ.

ಸರಣಿ ಸಭೆಗಳು: ವೇಣುಗೋಪಾಲ್‌ ಅವರು ಮೇ 7ರ ರಾತ್ರಿ ನಗರಕ್ಕೆ ಆಗಮಿಸಲಿದ್ದು, ಮೇ 8ರ ಬೆಳಗ್ಗೆ 10.30ರಿಂದ ಸಭೆಗಳ ಸರಣಿ ಆರಂ ಭಿಸಲಿದ್ದಾರೆ. ಮೊದಲಿಗೆ ನಡೆಯುವುದು ಸಮನ್ವಯ ಸಮಿತಿ ಸಭೆ. ಈ ಸಭೆಯ ನಂತರ ಅದೇ ದಿನ ಮಧ್ಯಾಹ್ನ 3ಕ್ಕೆ ಪದಾಧಿ ಕಾರಿಗಳು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ಹಾಗೂ ಎಲ್ಲಾ ಮುಂಚೂಣಿ ಘಟಕಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸುವರು. ಮೇ 9ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1.30ರವರೆಗೆ ಕಾಂಗ್ರೆಸ್‌ ಹಿರಿತಲೆಗಳ ಸಭೆ ನಡೆಸುವರು. ಮಧ್ಯಾಹ್ನ 3ರ ನಂತರ ರಾಜ್ಯದ ಎಲ್ಲಾಸಚಿವರೊಂದಿಗೆ ನೇರಾ ನೇರ ಮಾತುಕತೆ ನಡೆಸುವರು. ಜತೆಗೆ, ಶಾಸಕರು ಮತ್ತು ಎಂಎಲ್ಸಿಗಳ ಸಭೆ ನಡೆಸುವರು. ಮೇ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ್‌ ಹಾಗೂ ದಿನೇಶ್‌ ಗುಂಡೂರಾವ್‌ ಜತೆ ಪ್ರತ್ಯೇಕವಾಗಿ ನೇರಾನೇರ ಸಭೆಯನ್ನು ನಡೆಸುವರು.

ವೇಣು, ಸಂಭಾವ್ಯ ಪ್ರಶ್ನೆಗಳು:

ಇತರ ಹಲವು ವಿಚಾರಗಳು ಇದ್ದರೂ ಈ ಎಲ್ಲ ಸಭೆಗಳ ಮುಖ್ಯ ಅಜೆಂಡಾ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ. ಈ ಸಭೆಗಳಲ್ಲಿ ವೇಣುಗೋಪಾಲ್‌ ಕೆಲ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ. ಅವು:
1 ಹಾಲಿ ಕೆಪಿಸಿಸಿ ಅಧ್ಯಕ್ಷ್ಯ ಡಾ. ಜಿ. ಪರಮೇಶ್ವರ್‌ ಅವರನ್ನು ಬದಲಾಯಿಸಬೇಕೇ? ಹೌದು ಎಂದಾದರೆ, ಬೇಡ ಎಂದಾದರೆ ಕಾರಣಗಳೇನು?
2 ಬದಲಾವಣೆ ಅನಿವಾರ್ಯವಾದರೇ ಮುಂದಿನ ಅಧ್ಯಕ್ಷರಾಗಿ ಯಾವ ಸಮುದಾಯಕ್ಕೆ ಸೇರಿದ ನಾಯಕರನ್ನು ಆಯ್ಕೆ ಮಾಡಬೇಕು ?
3 ನಿರ್ದಿಷ್ಟ ಸಮುದಾಯಕ್ಕೆ ಸೇರಿದವರನ್ನು ಆಯ್ಕೆ ಮಾಡಬೇಕು ಎಂದಾದರೇ ಆ ಸಮುದಾಯದಲ್ಲಿ ಯಾರನ್ನು ಆರಿಸಬೇಕು ಮತ್ತು ಏಕೆ?
4 ನಿರ್ದಿಷ್ಟಸಮುದಾಯದ ನಿರ್ದಿಷ್ಟನಾಯಕರನ್ನು ಆಯ್ಕೆ ಮಾಡಿದ ನಂತರ ಪಕ್ಷದಲ್ಲಿ ಆಂತರಿಕ ತಳಮಳ ಉಂಟಾಗುವುದೇ? ಆಗುವುದಾದರೇ ಹೇಗೆ ತಹಬದಿಗೆ ತರಬೇಕು?
5 ಇತರ ಪ್ರಶ್ನೆಗಳು: ಚುನಾವಣೆಗೆ ಸಿದ್ಧತೆ ರೂಪುರೇಷೆ ಹೇಗಿರಬೇಕು. ಸರ್ಕಾರದಿಂದ ಜನಪರ ಘೋಷಣೆ ಗಳು ಏನೇನಾಗಬೇಕಿದೆ? ಮುಂದಿನ ಚುನಾವಣೆಗೆ ಜಾತ್ಯತೀತ ಶಕ್ತಿ ಗಳೊಂದಿಗೆ ಮೈತ್ರಿ ಬೇಕೇ, ಬೇಡವೇ? ಬೇಕು ಎಂದಾದರೇ ಅದರ ಸ್ವರೂಪ ಹೇಗಿರಬೇಕು. ಪಕ್ಷ ತ್ಯಜಿಸಲು ಮುಂದಾಗುತ್ತಿರುವ ನಾಯಕರನ್ನು ಹೇಗೆ ಪಕ್ಷದಲ್ಲಿ ಉಳಿದುಕೊಳ್ಳುವಂತೆ ಮಾಡುವುದು ಮತ್ತು ಮುಂದಿನ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಹೇಗೆ ನಡೆಸಬೇಕು?