ಕೃಷಿಕರಿಗೆ ಸಿಹಿ ಸುದ್ಧಿ: ಕೇಂದ್ರ ಬಜೆಟ್'ನಲ್ಲಿ ಹೊಸ ಸ್ಕೀಂ?
ಕೃಷಿ ಉತ್ಪನ್ನಗಳ ಬೆಲೆ ಕುಸಿಯುತ್ತಿದ್ದಂತೆ ಮಾರುಕಟ್ಟೆಗೆ ಮಧ್ಯಪ್ರವೇಶಿಸುವ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ರಾಜ್ಯ ಸರ್ಕಾರಗಳಿಗೆ ನೀಡುವ ಸಾಧ್ಯತೆ ಇದೆ.
ನವದೆಹಲಿ (ಜ.22): ಕೃಷಿ ಉತ್ಪನ್ನಗಳ ಬೆಲೆ ಕುಸಿಯುತ್ತಿದ್ದಂತೆ ಮಾರುಕಟ್ಟೆಗೆ ಮಧ್ಯಪ್ರವೇಶಿಸುವ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ರಾಜ್ಯ ಸರ್ಕಾರಗಳಿಗೆ ನೀಡುವ ಸಾಧ್ಯತೆ ಇದೆ.
ಇದಕ್ಕಾಗಿ ‘ಮಾರುಕಟ್ಟೆ ಭರವಸೆ ಯೋಜನೆ’ಯನ್ನು ಫೆ.1 ರಂದು ಮಂಡನೆಯಾಗಲಿರುವ ಬಜೆಟ್'ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ. ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿಯುತ್ತಿದ್ದಂತೆ ಕೇಂದ್ರದ ಅನುಮತಿಗಾಗಿ ಕಾಯದೇ ನೇರವಾಗಿ ಬೆಂಬಲ ಬೆಲೆಯಡಿ ಉತ್ಪನ್ನ ಖರೀದಿಸುವ ಮುಕ್ತ ಅವಕಾಶ ರಾಜ್ಯ ಸರ್ಕಾರಗಳಿಗೆ ಇದರಡಿ ಸಿಗುತ್ತದೆ.
ಈವರೆಗೂ ಬೆಂಬಲ ಬೆಲೆಯಡಿ ಖರೀದಿಗೆ ಕೇಂದ್ರ ಸರ್ಕಾರದ ಅನುಮೋದನೆಗಾಗಿ ರಾಜ್ಯ ಸರ್ಕಾರಗಳು ಕಾಯಬೇಕಿತ್ತು. ಬೆಂಬಲ ಬೆಲ ನೀಡಿ ಖರೀದಿಸುವ ವೇಳೆ ಖರೀದಿ, ಸಂಗ್ರಹ, ಮಾರಾಟ, ಬಡ್ಡಿ ಹಾಗೂ ಪೂರಕ ವೆಚ್ಚಗಳಿಂದ ಆಗುವ ನಷ್ಟದ ಪೈಕಿ ಶೇ.40 ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುತ್ತದೆ.
ಯಾವ ಬೆಳೆ?
ಭತ್ತ, ಗೋಧಿ ಹೊರತುಪಡಿಸಿ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿರುವ ಯಾವುದೇ ಉತ್ಪನ್ನಗಳನ್ನು ರಾಜ್ಯಗಳು ಖರೀದಿಸಬಹುದು. ಪ್ರಮಾಣಕ್ಕೆ ಯಾವುದೇ ಮಿತಿ ಇರುವುದಿಲ್ಲ. ಈರುಳ್ಳಿ, ಆಲೂಗಡ್ಡೆ, ಟೊಮಾಟೋದಂತಹ ಬೇಗ ಹಾಳಾಗುವಂತಹ ಕೃಷಿ ಉತ್ಪನ್ನಗಳನ್ನು ಸದ್ಯದ ಮಟ್ಟಿಗೆ ಈ ಯೋಜನೆಯಿಂದ ಹೊರಗಿಡಲಾಗುತ್ತದೆ ಎಂದು ಹೇಳಲಾಗಿದೆ.
ಈವರೆಗೆ ಯೋಜನೆ ಹೇಗಿತ್ತು?:
ಬೆಲೆ ಕುಸಿತದಿಂದ ರೈತರನ್ನು ಪಾರು ಮಾಡಲು ಸದ್ಯ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂಐಎಸ್), ಬೆಲೆ ಬೆಂಬಲ ಯೋಜನೆ (ಪಿಎಸ್ಎಸ್) ಯೋಜನೆಗಳು ಇವೆ. ಬೆಲೆ ಕುಸಿದಾಗ ರಾಜ್ಯ ಸರ್ಕಾರಗಳು ನೇರವಾಗಿ ಮಧ್ಯಪ್ರವೇಶಿಸುವಂ ತಿಲ್ಲ. ಕೇಂದ್ರದಿಂದ ಒಪ್ಪಿಗೆ ಪಡೆದ ಬಳಿಕವಷ್ಟೇ ಬೆಂಬಲ ಬೆಲೆಯಡಿ ಉತ್ಪನ್ನಗಳನ್ನು ಖರೀದಿ ಮಾಡಬೇಕು. ಅಂತಹ ಸಂದರ್ಭದಲ್ಲಿ ರಾಜ್ಯಗಳಿಗೆ ಆಗುವ ಶೇ.50 ರಷ್ಟು ನಷ್ಟವನ್ನು ಕೇಂದ್ರ ಸರ್ಕಾರ ಭರಿಸಿಕೊಡುತ್ತದೆ.