ಕಾಶ್ಮೀರ ಸಮಸ್ಯೆಗೆ ಮೋದಿಯಲ್ಲ, ನೆಹರೂ ಕಾರಣ: ವೆಂಕಯ್ಯ ನಾಯ್ಡು
ಕಾಶ್ಮೀರ ಸಮಸ್ಯೆಗೆ ಪ್ರಧಾನಿ ನರೇಂದ್ರ ಮೋದಿ ಅಥವಾ ಎನ್’ಡಿಏ ಸರ್ಕಾರ ಹೊಣೆಯಲ್ಲ ಬದಲಾಗಿ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ತಪ್ಪು ಧೋರಣೆಗಳೇ ಕಾರಣವೆಂದು ನಾಯ್ಡು ಹೇಳಿದ್ದಾರೆ.
ನವದೆಹಲಿ (ಫೆ.26): ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಮಾಜಿ ಗೃಹ ಸಚಿವ ಪಿ,ಚಿದಂಬರಂ ಅವರ ಹೇಳಿಕೆಯನ್ನು ರಾಜಕೀಯ ಪ್ರೇರಿತ ಎಂದು ಬಣ್ಣಿಸಿರುವ ಕೇಂದ್ರ ವಾರ್ತಾ ಸಚಿವ ವೆಂಕಯ್ಯ ನಾಯ್ಡು, ಆ ಕುರಿತು ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಹೇಳಿದ್ದಾರೆ.
ಕಾಶ್ಮೀರ ಸಮಸ್ಯೆಗೆ ಪ್ರಧಾನಿ ನರೇಂದ್ರ ಮೋದಿ ಅಥವಾ ಎನ್’ಡಿಏ ಸರ್ಕಾರ ಹೊಣೆಯಲ್ಲ ಬದಲಾಗಿ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ತಪ್ಪು ಧೋರಣೆಗಳೇ ಕಾರಣವೆಂದು ನಾಯ್ಡು ಹೇಳಿದ್ದಾರೆ.
ಚಿದಂಬರಂ ಹೇಳಿಕೆಯು ಬೇಜವಾಬ್ದಾರಿತನದಿಂದ ಕೂಡಿದೆ ಹಾಗೂ ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ. ಆದುದರಿಂದ ಕಾಂಗ್ರೆಸ್ ಪಕ್ಷವು ಕಾಶ್ಮೀರ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು, ಎಂದು ನಾಯ್ಡು ಹೇಳಿದ್ದಾರೆ.
ಕಾಂಗ್ರೆಸ್ ಸುಮಾರು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಕಾಶ್ಮೀರ ಸಮಸ್ಯೆ ಬಗೆಹರಿಸಲು ಅವರು ಏನು ಮಾಡಿದ್ದಾರೆ? ಈಗ ಅಧಿಕಾರ ಕಳೆದುಕೊಂಡ ಬಳಿಕ ಕೀಳು ಮಟ್ಟದ ರಾಜಕೀಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ನಾಯ್ಡು ಕಿಡಿಕಾರಿದ್ದಾರೆ.
ಕಳೆದ ಶುಕ್ರವಾರ ಹೈದರಬಾದ’ನಲ್ಲಿ ಕಾರ್ಯಕ್ರಮವೊಂದರಲ್ಲಿ, ಕಾಶ್ಮೀರದಲ್ಲಿ ಭಿನ್ನಾಭಿಪ್ರಾಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರವು ಅಗತ್ಯಕ್ಕಿಂತ ಹೆಚ್ಚು ಬಲಪ್ರಯೋಗ ಮಾಡುವ ಮೂಲಕ ಭಾರತವು ಕಾಶ್ಮೀರವನ್ನು ಬಹುತೇಕವಾಗಿ ಕಳದುಕೊಂಡಿದೆಯೆಂದು ಚಿದಂಬರಂ ಹೇಳಿದ್ದರು.