ಮುಂದಿನ 10 ವರ್ಷಗಳಲ್ಲಿ ಪ್ರವಾಹಕ್ಕೆ 16,000 ಮಂದಿ ಬಲಿ?
- ಮುಂದಿನ ಹತ್ತು ವರ್ಷಗಳಲ್ಲಿ ದೇಶದಲ್ಲಿ ಇನ್ನೂ 16,000 ಜನರು ಪ್ರಾಣ ಕಳೆದುಕೊಳ್ಳಲಿದ್ದಾರೆ
- 47,000 ಕೋಟಿ ರು. ಮೌಲ್ಯದ ಆಸ್ತಿ ನಷ್ಟ
ನವದೆಹಲಿ (ಆ. 21): ದೇಶದಲ್ಲಿ ಈಗಾಗಲೇ ಭೀಕರ ಮಳೆ ಸಂಬಂಧಿತ ಘಟನೆಗಳಿಂದ ಜನ ತತ್ತರಿಸಿ ಹೋಗಿದ್ದಾರೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ, ಮುಂದಿನ ಹತ್ತು ವರ್ಷಗಳಲ್ಲಿ ದೇಶದಲ್ಲಿ ಇನ್ನೂ 16,000 ಜನರು ಪ್ರಾಣ ಕಳೆದುಕೊಳ್ಳಲಿದ್ದಾರೆ ಮತ್ತು ಸುಮಾರು 47,000 ಕೋಟಿ ರು. ಮೌಲ್ಯದ ಆಸ್ತಿ ನಷ್ಟವಾಗಲಿದೆ.
ರಾಷ್ಟ್ರೀಯ ದುರಂತ ನಿರ್ವಹಣಾ ಪ್ರಾಧಿಕಾರ(ಎನ್ಡಿಎಂಎ)ದ ಪ್ರವಾಹ ಸಂಬಂಧಿ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡ ಮತ್ತು ಆಸ್ತಿ ನಷ್ಟದ ವಾರ್ಷಿಕ ಸರಾಸರಿ ಅಂಕಿ ಅಂಶಗಳ ಆಧಾರದಲ್ಲಿ ಈ ರೀತಿ ಅಂದಾಜಿಸಲಾಗಿದೆ. ದೇಶದಲ್ಲಿ ಅತ್ಯಂತ ಸುಧಾರಿತ ಸೆಟಲೈಟ್ ವ್ಯವಸ್ಥೆ ಮತ್ತು ಎಚ್ಚರಿಕೆ ಮುನ್ಸೂಚನಾ ವ್ಯವಸ್ಥೆಯಿದ್ದರೂ ದುರಂತ ನಿರ್ವಹಣಾ ಶಿಫಾರಸುಗಳು ಕಾಗದದಲ್ಲಿ ಮಾತ್ರ ಇವೆ. ಕೇಂದ್ರ ಗೃಹ ಇಲಾಖೆಯು ಇತ್ತೀಚೆಗೆ ರಾಷ್ಟ್ರೀಯ ರಿಸಿಲೆನ್ಸ್ ಸೂಚ್ಯಂಕ ಸಿದ್ಧಪಡಿಸಿದೆ. ಹಿಮಾಚಲ ಪ್ರದೇಶ ಹೊರತುಪಡಿಸಿ ಯಾವುದೇ ರಾಜ್ಯ ಸಮಗ್ರ ಅಪಾಯ ಮೌಲ್ಯಮಾಪನವನ್ನು ಮಾಡಿಲ್ಲ ಎಂದು ಈ ವರದಿ ತಿಳಿಸಿದೆ.