11 ರಾಜ್ಯಗಳಿಗೆ ಡಬಲ್ ಧಮಾಕಾ, ಕರ್ನಾಟಕ ಪಟ್ಟಿಯಲ್ಲಿದೆಯೇ?
ಕೇಂದ್ರ ಸರ್ಕಾರ ತೈಲ ದರಗಳನ್ನು 2.50 ರೂ. ಕಡಿತಗೊಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೇಂದ್ರ ಸರ್ಕಾರದಿಂದ 1.50 ರೂ. ಹಾಗೂ ತೈಲ ಕಂಪನಿಗಳಿಂದ 1 ರೂ. ಕಡಿತಗೊಳಿಸಿರುವುದಾಗಿ ತಿಳಿಸಿ ರಾಜ್ಯಗಳು ಕೇಂದ್ರದ ಜತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದರು.
ನವದೆಹಲಿ[ಅ.04]: ಎನ್ ಡಿಎ ಆಡಳಿತದಲ್ಲಿರುವ ರಾಜ್ಯಗಳ ಜನರಿಗೆ ಡಬಲ್ ಲಾಭ ಸಿಗಲಿದೆ. ಅಂದರೆ ಎನ್ ಡಿಎ ಅಧಿಕಾರ ನಡೆಸುತ್ತಿರುವ ರಾಜ್ಯಗಳು 2.5 ರೂ. ಕಡಿಮೆ ಮಾಡಲಿವೆ. ಅಲ್ಲಿಗೆ ತೈಲ ದರ 5 ರೂ. ಕಡಿಮೆ ಆದಂತೆ ಆಗುತ್ತದೆ.
ಮಹಾರಾಷ್ಟ್ರ, ಗುಜರಾತ್ ನಂತರ ಛತ್ತೀಸ್ ಘಡ, ಜಾರ್ಖಂಡ್, ತ್ರಿಪುರಾ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಅಸ್ಸಾಂ, ಉತ್ತರಾಖಾಂಡ್ ಸಹ 2.5 ರೂ ಕಡಿಮೆ ಮಾಡಲು ಒಪ್ಪಿಗೆ ನೀಡಿವೆ. ಗವರ್ನರ್ ಆಳ್ವಿಕೆಯಲ್ಲಿರುವ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ದರ ಕಡಿಮೆಯಾಗಲಿದೆ.
ಕಚ್ಚಾ ತೈಲ ದರ ದಿನೇ ದಿನೇ ಹೆಚ್ಚಳವಾಗುತ್ತಿದೆ. ಜಗತ್ತಿನ ಎಲ್ಲ ಮಾರುಕಟ್ಟೆಗಳ ಮೇಲೆ ತೈಲದರ ಹೆಚ್ಚಳ ಪರಿಣಾಮ ಬೀರುತ್ತಿದೆ. ಈ ಎಲ್ಲ ಬೆಳವಣಿಗೆ ಕುರಿತು ಇಲಾಖೆಯಲ್ಲಿ ಚರ್ಚೆ ನಡೆಸಲಾಗಿದೆ. ಹಣಕಾಸು ಮತ್ತು ಪೆಟ್ರೋಲಿಯಂ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಜನಸಮಾನ್ಯರಿಗೆ ನೆರವಾಗಲು ಪ್ರತಿಯೊಂದು ರಾಜ್ಯಗಳು ಮುಂದೆ ಬರಬೇಕು ಎಂದು ಜೇಟ್ಲಿ ಮನವಿ ಮಾಡಿದ್ದರು.