ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ|  ಗೃಹ ಬಂಧನದಲ್ಲಿರುವ ಪ್ರಮುಖ ಕಾಶ್ಮೀರಿ ನಾಯಕರು| ಫಾರೂಖ್ ಅಬ್ದುಲ್ಲಾ ಹಾಗೂ ಓಮರ್ ಅಬ್ದುಲ್ಲಾ ಭೇಟಿಗೆ ಎನ್‌ಸಿ ನಿಯೋಗಕ್ಕೆ ಅವಕಾಶ| ಪಕ್ಷದ ಉನ್ನತ ನಾಯಕರನ್ನು ಭೇಟಿಯಾಗಲಿರುವ ದೇವೇಂದ್ರ ಸಿಂಗ್ ರಾಣಾ ನೇತೃತ್ವದ ಎನ್‌ಸಿ ನಿಯೋಗ|

ಶ್ರೀನಗರ(ಅ.05): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ, ಕಾಶ್ಮೀರಿ ನಾಯಕರು ಗೃಹ ಬಂಧನದಲ್ಲಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

Add Asianetnews Kannada as a Preferred SourcegooglePreferred

ಕಣಿವೆಯಲ್ಲಿನ ವಾತಾವರಣ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಂತೇ ಹಂತ ಹಂತವಾಗಿ ನಿಷೇಧಾಜ್ಞೆಯನ್ನು ತೆರವುಗೊಳಿಸುತ್ತಿರುವ ಕೇಂದ್ರ ಸರ್ಕಾರ, ಗೃಹ ಬಂಧನದ ನಿಯಮವನ್ನೂ ಸಡಿಲಗೊಳಿಸುತ್ತಿದೆ.

ಅದರಂತೆ ಕಳೆದೆರಡು ತಿಂಗಳಿನಿಂದ ಗೃಹ ಬಂಧನದಲ್ಲಿರುವ ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ ಹಾಗೂ ಪುತ್ರ ಓಮರ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಲು ಪಕ್ಷದ ನಿಯೋಗಕ್ಕೆ ಅನುಮತಿ ನೀಡಲಾಗಿದೆ.

ಪಕ್ಷದ ಉನ್ನತ ನಾಯಕರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಸ್ಥಳೀಯ ಅಧ್ಯಕ್ಷ ದೇವೇಂದ್ರ ಸಿಂಗ್ ರಾಣಾ ಸರ್ಕಾರಕ್ಕೆ ಮನವಿ ಮಾಡಿದ್ದರು. ರಾಣಾ ಮನವಿಯನ್ನು ಪುರಸ್ಕರಿಸಿರುವ ಸರ್ಕಾರ, ಇಬ್ಬರೂ ನಾಯಕರ ಭೇಟಿಗೆ ನಿಯೋಗಕ್ಕೆ ಅವಕಾಶ ಕಲ್ಪಿಸಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ, ಕಾಶ್ಮೀರಿ ನಾಯಕರು ಗೃಹ ಬಂಧನದಲ್ಲಿದ್ದು, ಪ್ರಮುಖವಾಗಿ ಮಾಜಿ ಸಿಎಂಗಳಾದ ಫಾರೂಖ್ ಅಬ್ದುಲ್ಲಾ, ಓನರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿದಂತೆ ಹಲವು ಪ್ರಮುಖ ನಾಯಕರ ಮೇಲೆ ತೀವ್ರ ನಿಗಾ ಇಡಲಾಗಿದೆ.