ತ್ರಿವರ್ಣ ಧ್ವಜದ ಜನಕನನ್ನು ಸ್ಮರಿಸಿದ ಭಾರತ
ಇಂದು ರಾಷ್ಟ್ರಧ್ವಜದ ಜನಕ ಪಿಂಗಾಳಿ ವೆಂಕಯ್ಯ ಅವರನ್ನು ದೇಶದಾದ್ಯಂತ ನೆನೆಯಲಾಗುತ್ತಿದೆ. ತ್ರಿವರ್ಣ ಧ್ವಜವನ್ನು ರಚಿಸಿದ ವೆಂಕಯ್ಯ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ದೇಶದಾದ್ಯಂತ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ.
ನವದೆಹಲಿ: ಭಾರತೀಯ ತ್ರಿವರ್ಣ ಧ್ವಜ ಎನ್ನುವುದು ಗೌರವದ ಪ್ರತೀಕವಾಗಿರುವಂತದ್ದು, ಇಂತಹ ಧ್ವಜವನ್ನು ರಚಿಸಿದ ಪಿಂಗಾಳಿ ವೆಂಕಯ್ಯ ಅವರನ್ನು ದೇಶದಾದ್ಯಂತ ಈ ಸಂದರ್ಭದಲ್ಲಿ ನೆನೆಯಲಾಗುತ್ತಿದೆ. ಗುರುವಾರ ಅವರ ಜನ್ಮ ದಿನದ ಪ್ರಯುಕ್ತ ದೇಶದಾದ್ಯಂತ ಪಿಂಗಾಣಿ ವೆಂಕಯ್ಯ ಅವರಿಗೆ ಗೌರವ ಸಲ್ಲಿಸಲಾಗಿದೆ.
ಸ್ವಾತಂತ್ರ್ಯ ಹೋರಾಟಗಾರರಾದ ಪಿಂಗಾಳಿ ವೆಂಕಯ್ಯ ಅವರು 1876 ಆಗಸ್ಟ್ 2 ರಂದು ಜನಿಸಿದರು. ತಮ್ಮ 19ನೇ ವಯಸ್ಸಿನಲ್ಲಿ ಅವರು ಬ್ರಿಟೀಷ್ ಸೇನೆಗೆ ಸೇರ್ಪಡೆಯಾದರು. ಇದೇ ವೇಳೆ ಮಹಾತ್ಮ ಗಾಂಧಿಯನ್ನು ಭೇಟಿ ಮಾಡಿದ ಅವರು ಬಳಿಕ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು.
1921ರಲ್ಲಿ ದೇಶಕ್ಕೆ ಧ್ವಜವೊಂದು ಬೇಕು ಎಂದು ಮಹಾತ್ಮ ಗಾಂಧೀಜಿ ಅವರು ವೆಂಕಯ್ಯ ಅವರ ಬಳಿ ಹೇಳಿದರು. ಈ ವೇಳೆ ವೆಂಕಯ್ಯ ಅವರು ಹಸಿರು ಮತ್ತು ಕೇಸರಿ ಬಣ್ಣದ ಧ್ವಜದೊಂದಿಗೆ ಮಹಾತ್ಮ ಗಾಂಧೀಜಿ ಬಳಿ ಬಂದಾಗ ಅದಕ್ಕೆ ಈ ವೇಳೆ ಮಹಾತ್ಮ ಗಾಂಧೀಜಿ ಅವರು ಬಿಳಿಯ ಬಣ್ಣವನ್ನು ಸೇರಿಸುವಂತೆ ತಿಳಿಸಿದರು.
ಅದಕ್ಕೆ ಆರ್ಯ ಸಮಾಜದ ಸಂಸ್ಥಾಪಕ ಲಾಲಾ ಹಂಸರಾಜ ಅವರು ಧರ್ಮ ಚಕ್ರವನ್ನು ಸೇರಿಸಿದ್ದು, ಬಳಿಕ ಭಾರತಕ್ಕೆ ಸುಂದರ ಧ್ವಜವೊಂದರ ನಿರ್ಮಾಣವಾಯ್ತು. 1931ರಲ್ಲಿ ಅಧಿಕೃತವಾಗಿ ಇದನ್ನು ರಾಷ್ಟ್ರಧ್ವಜವೆಂದು ಒಪ್ಪಿಕೊಳ್ಳಲಾಯ್ತು. ಇಂತಹ ಸುಂದರವಾದ ನಮ್ಮ ಭಾರತದ ಧ್ವಜವನ್ನು ರಚಿಸಿದ ಪಿಂಗಾಳಿ ವೆಂಕಯ್ಯ ಅವರ ಜನ್ಮ ದಿನದ ಈ ಸಂದರ್ಭದಲ್ಲಿ ದೇಶದಾದ್ಯಂತ ಅವರಿಗೆ ಗೌರವ ಅರ್ಪಿಸಲಾಗುತ್ತಿದೆ.