ರೈತರ ಸಮಸ್ಯೆಗೆ ಸ್ಪಂದಿಸಲು ಫೆ.19, 20ರಂದು ಮೋದಿ ಸಭೆ
ಸಂಕಷ್ಟದಲ್ಲಿರುವ ಕೃಷಿಕರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 19 ಹಾಗೂ 20ರಂದು ‘ರಾಷ್ಟ್ರೀಯ ಸಮ್ಮೇಳನ-2022’ ಹೆಸರಿನಲ್ಲಿ ಮಹತ್ವದ ಸಮಾಲೋಚನಾ ಸಭೆಯೊಂದನ್ನು ಆಯೋಜಿಸಿದ್ದಾರೆ
ನವದೆಹಲಿ : ಸಂಕಷ್ಟದಲ್ಲಿರುವ ಕೃಷಿಕರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 19 ಹಾಗೂ 20ರಂದು ‘ರಾಷ್ಟ್ರೀಯ ಸಮ್ಮೇಳನ-2022’ ಹೆಸರಿನಲ್ಲಿ ಮಹತ್ವದ ಸಮಾಲೋಚನಾ ಸಭೆಯೊಂದನ್ನು ಆಯೋಜಿಸಿದ್ದಾರೆ.
ದಿಲ್ಲಿಯ ಪೂಸಾ ಸಂಕೀರ್ಣದಲ್ಲಿ ಸಭೆ ನಡೆಯಲಿದ್ದು, ಕೃಷಿ ಸಚಿವಾಲಯವು ಇದನ್ನು ಆಯೋಜಿಸಿದೆ. 2 ದಿವಸಗಳ ಈ ಸಮ್ಮೇಳನದಲ್ಲಿ ಪ್ರಧಾನಮಂತ್ರಿಗಳು ಫೆ.20ರಂದು ಪಾಲ್ಗೊಳ್ಳಲಿದ್ದಾರೆ.
ಕೃಷಿ ಸಚಿವ ರಾಧಾಮೋಹನ್ ಸಿಂಗ್, ಕೃಷಿ ತಜ್ಞರು, ನೀತಿ ಆಯೋಗದ ಹಿರಿಯ ಅಧಿಕಾರಿಗಳು, ಕೃಷಿ ಬೆಲೆ ಆಯೋಗದ ಅಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯಗಳ ಮುಖ್ಯಸ್ಥರು, ರೈತರು ಹಾಗೂ ರೈತ ಸಂಘಟನೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೊದಲ ದಿನದ ಸಭೆಯಲ್ಲಿ ಕೃಷಿಯಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು, ಆ ದಿನದ ಚರ್ಚೆ ಆಧರಿಸಿ ವರದಿ ಸಿದ್ಧಪಡಿಸಲಾಗುತ್ತದೆ. ಮಾರನೆಯ ದಿನ ಪ್ರಧಾನಿಯವರಿಗೆ ವರದಿ ಸಲ್ಲಿಸಲಾಗುತ್ತದೆ. ಇದರಿಂದ ಪ್ರಧಾನಿಯವರಿಗೆ ಕೃಷಿ ನೀತಿ ರೂಪಿಸಲು ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ. ದೇಶದಲ್ಲಿ ರೈತರು ಅತೀವೃಷ್ಟಿ-ಅನಾವೃಷ್ಟಿಹಾಗೂ ಬೆಳೆ ಬಂದಿದ್ದರೂ ಬೆಲೆ ಕುಸಿತದ ಸಮಸ್ಯೆಯಿಂದ ನರಳುತ್ತಿದ್ದಾರೆ.