ಶೀಘ್ರದಲ್ಲೇ ಬದಲಾಗಲಿದೆ ಮೈಸೂರು ವಿಶ್ವವಿದ್ಯಾಲಯದ ಹೆಸರು
ಶೀಘ್ರದಲ್ಲೇ ಮೈಸೂರು ವಿಶ್ವವಿದ್ಯಾಲಯದ ಹೆಸರು ಬದಲಾಗಲಿದೆ.
ಮೈಸೂರು, [ಅ.11]: ಮೈಸೂರು ವಿಶ್ವವಿದ್ಯಾಲಯಕ್ಕೆ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಹೆಸರು ನಾಮಕರಣ ಮಾಡಲು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಇಲ್ಲಿನ ಅರಮನೆ ಮುಂಭಾಗ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬುಧವಾರ ಸಂಜೆ ಚಾಲನೆ ಮಾತನಾಡಿ, ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿಯಾದಾಗ ಮೈಸೂರು ವಿವಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ವಿವಿ ಎಂದು ನಾಮಕರಣ ಮಾಡಲು ಕೋರಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಹೀಗಾಗಿ, ಮೈಸೂರು ಅರಮನೆ ಅಭಿಪ್ರಾಯವನ್ನು ಪರಿಗಣಿಸಿ ಸದ್ಯದಲ್ಲೇ ಈ ಕುರಿತು ತೀರ್ಮಾನವೊಂದನ್ನು ತೆಗೆದುಕೊಳ್ಳಲಾಗುವುದು. ಆ ಮೂಲಕ ನಾಡಿಗೆ ನಾಲ್ವಡಿ ನೀಡಿರುವ ಕೊಡುಗೆಗಳನ್ನು ಸ್ಮರಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.
ಇದಕ್ಕೂ ಮುನ್ನ ಖಾಸಗಿ ದರ್ಬಾರ್ನಲ್ಲಿ ಭಾಗಿಯಾಗಿದ್ದ ಪ್ರಮೋದಾದೇವಿ ಒಡೆಯರ್ ಅವರನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭೇಟಿಯಾಗಿ, ದಸರಾ ಮಹೋತ್ಸವದ ಶುಭಾಶಯ ಕೋರಿದರು.