ಉದ್ಯಮಿ ಲೋಕನಾಥನ್‌ ಪುತ್ರ ವಿದ್ವತ್‌ ಮೇಲಿನ ಹಲ್ಲೆ ಪ್ರಕರಣದ ಆರೋಪಿ ನಲಪಾಡ್‌ನ ಇತರೆ ಐದು ಜನ ಸಹಚರರಿಗೆ ನಗರದ 63ನೇ ಸೆಷನ್ಸ್‌ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರು : ಉದ್ಯಮಿ ಲೋಕನಾಥನ್‌ ಪುತ್ರ ವಿದ್ವತ್‌ ಮೇಲಿನ ಹಲ್ಲೆ ಪ್ರಕರಣದ ಆರೋಪಿ ನಲಪಾಡ್‌ನ ಇತರೆ ಐದು ಜನ ಸಹಚರರಿಗೆ ನಗರದ 63ನೇ ಸೆಷನ್ಸ್‌ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಅವರು ಐದು ಜನ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಪ್ರಕರಣ ಪ್ರಮುಖ ಆರೋಪಿಗಳಾದ ನಲಪಾಡ್‌ ಹ್ಯಾರಿಸ್‌ ಮತ್ತು ಅಭಿಷೇಕ್‌ಗೆ ಹೈಕೋರ್ಟ್‌ ಇತ್ತೀಚೆಗೆ ಜಾಮೀನು ನೀಡಿತ್ತು. ಅಲ್ಲದೆ, ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ತನಿಖೆ ಪೂರ್ಣಗೊಳಿಸಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.

ನ್ಯಾಯಾಲಯದ ಈ ಆದೇಶದಿಂದಾಗಿ ಫೆ.19ರಿಂದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃದಲ್ಲಿದ್ದ ಆರೋಪಿಗಳಾದ ಮಂಜುನಾಥ್‌, ಮಹಮದ್‌ ಅಶ್ರಫ್‌, ಮಹಮದ್‌ ನಾಸಿರ್‌, ಅರುಣ್‌ ಬಾಬು ಮತ್ತು ಬಾಲಕೃಷ್ಣಗೆ ಬಿಡುಗಡೆಯಾಗುವಂತಾಗಿದೆ.

ಷರತ್ತುಗಳು: ಪ್ರತಿ ಆರೋಪಿಯು ತಲಾ 2 ಲಕ್ಷ ಬಾಂಡ್‌, ಇಬ್ಬರ ಶ್ಯೂರಿಟಿ, ಕೋರ್ಟ್‌ ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ತೆರಳಬಾರದು. ಸಾಕ್ಷಿಗಳ ನಾಶಕ್ಕೆ ಮುಂದಾಗಬಾರದು ಹಾಗೂ ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎಂದು ನ್ಯಾಯಾದೀಶರು ಷರತ್ತುಗಳನ್ನು ವಿಧಿಸಿದ್ದಾರೆ.