ಮಳೆಗಾಗಿ ಬಾಲಕರ ಬೆತ್ತಲೆ ಮೆರವಣಿಗೆ!
ಸತತ ಬರಗಾಲದಿಂದ ತತ್ತರಿಸಿದ ಜಿಲ್ಲೆಯ ಜನತೆ ಈಗ ಮಳೆಗಾಗಿ ಬಾಲಕರನ್ನು ಬೆತ್ತಲೆ ಮೆರವಣಿಗೆ ನಡೆಸಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕಬ್ಬಾರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಹಿರೇಕೆರೂರು (ಜೂ.28): ಸತತ ಬರಗಾಲದಿಂದ ತತ್ತರಿಸಿದ ಜಿಲ್ಲೆಯ ಜನತೆ ಈಗ ಮಳೆಗಾಗಿ ಬಾಲಕರನ್ನು ಬೆತ್ತಲೆ ಮೆರವಣಿಗೆ ನಡೆಸಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕಬ್ಬಾರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಮಳೆಗಾಗಿ ವಿಶೇಷ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮೂವರು ಬಾಲಕರನ್ನು ಬೆತ್ತಲುಗೊಳಿಸಿ ತಲೆ ಮೇಲೆ ಮಣೆಯಲ್ಲಿ ಮಣ್ಣಿನ ಮೂರ್ತಿಯಿಟ್ಟು ಓಣಿಗಳಲ್ಲಿ ಮೆರವಣಿಗೆ ನಡೆಸಲಾಗಿದೆ. ಮಣ್ಣಿನ ಮೂರ್ತಿಗೆ ಗ್ರಾಮದವರು ಹೂವು ಹಾಕಿ, ಕರ್ಪೂರ, ಕಡ್ಡಿ ಹಚ್ಚಿ ಪೂಜೆ ಸಲ್ಲಿಸಿದ್ದಾರೆ. ಗ್ರಾಮದ ಮಹಿಳೆಯರು ಮಳೆಗಾಗಿ ಪ್ರಾರ್ಥಿಸಿ ಇದೇ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ್ದಾರೆ. ಮಳೆಯಿಲ್ಲದೇ ಕಳೆದ ಮೂರು ವರ್ಷಗಳಿಂದ ರೈತರು ಕಂಗೆಟ್ಟಿದ್ದಾರೆ. ಈ ಬಾರಿ ಇನ್ನೂ ಮಳೆಯಾಗದ್ದರಿಂದ ಬಿತ್ತನೆ ಮಾಡಿದ ಬೀಜವೂ ಹಾಳಾಗುತ್ತಿದೆ. ಮಕ್ಕಳನ್ನು ಬೆತ್ತಲೆ ಮೆರವಣಿಗೆ ಮಾಡಿದರೆ ಮಳೆಯಾಗುತ್ತದೆ ಎಂಬ ನಂಬಿಕೆಯಿದೆಯಾದ್ದರಿಂದ ಹೀಗೆ ಮಾಡಲಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಆದರೆ ಗ್ರಾಮಸ್ಥರ ನಡೆಗೆ ಹಲವೆಡೆಯಿಂದ ಆಕ್ಷೇಪವೂ ವ್ಯಕ್ತವಾಗಿದೆ.
Last Updated Apr 11, 2018, 1:02 PM IST