ಪ್ರಕಾಶ್ ರೈ ವಿರುದ್ಧ ಅವಹೇಳನಕಾರಿ ಪೋಸ್ಟ್, ಸಂಸದ ಪ್ರತಾಪ್ ಸಿಂಹ ಪೊಲೀಸ್ ವಶಕ್ಕೆ
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ಕೋರ್ಟ್ ಕಸ್ಟಡಿಗೆ ಪಡೆದಿದೆ. ನಟ ಪ್ರಕಾಶ್ ರಾಜ್ ಅವರು ಸಂಸದರ ವಿರುದ್ಧ ಮಾನಷ್ಟ ಮೊಕದ್ದಮೆ ದಾಖಲು ಮಾಡಿದ್ದರು.
ಬೆಂಗಳೂರು, (ಮಾ.08): ನಟ ಪ್ರಕಾಶ್ ರಾಜ್ ಅವರ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ್ದ ಪ್ರಕರಣದಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅವಹೇಳನಕಾರಿ ಟ್ವೀಟ್ಗೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್ ಅವರು ಮೈಸೂರಿನ ನ್ಯಾಯಾಲಯದಲ್ಲಿ 1 ರೂ.ಗೆ ಮಾನನಷ್ಟ ಕೇಸು ದಾಖಲಿಸಿದ್ದರು.
ಈ ಪ್ರಕರಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಆದರೆ, ಸತತವಾಗಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಫೆ.23ರಂದು ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು.
ಇಂದು (ಶುಕ್ರವಾರ) ಕೋರ್ಟ್ ಗೆ ಹಾಜರಾಗಿದ್ದ ಪ್ರತಾಪ್ ಸಿಂಹ ಅವರನ್ನು ಕಸ್ಟಡಿಗೆ ಪಡೆದಿದೆ. ಪ್ರಕರಣವನ್ನು ಮತ್ತೊಮ್ಮೆ ವಿಚಾರಣೆಗೆ ಕೈಗೆತ್ತಿಕೊಳ್ಳುವರೆಗೆ ಅವರನ್ನು ಸುಪರ್ದಿಯಲ್ಲಿಟ್ಟುಕೊಳ್ಳುವಂತೆ ಕೋರ್ಟ್, ಪೊಲೀಸರಿಗೆ ಸೂಚಿಸಿದೆ.
ಸಂಸದ ಪ್ರತಾಪ್ ಸಿಂಹ ಬಂಧನಕ್ಕೆ ವಾರೆಂಟ್ ಜಾರಿ
ಪರ್ತಕರ್ತೆ ಗೌರಿ ಹತ್ಯೆ ಸಂಬಂಧ ರಾಜ್ ಮತ್ತು ಪ್ರತಾಪ್ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ವಾದ ನಡೆಯುತ್ತಿತ್ತು. ಈ ನಡುವೆ ಗೌರಿ ಹತ್ಯೆ ವಿಚಾರವಾಗಿ ಪ್ರಕಾಶ್ ರಾಜ್ ಪ್ರಧಾನಿಯನ್ನು ಟೀಕಿಸಿದ್ದರು.
ಇದಕ್ಕೆ ಟ್ವಿಟರ್ ಮೂಲಕ ತಿರುಗೇಟು ನೀಡಲು ಹೋಗಿದ್ದ ಸಂಸದ ಪ್ರತಾಪ್ ಸಿಂಹ, ” ಮಗ ಮೃತಪಟ್ಟಿದ್ದರೂ ಡ್ಯಾನ್ಸರ್ ಹಿಂದೆ ಓಡಾಡಿದವರಿಗೆ ಪ್ರಧಾನಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ,” ಎಂದು ಟ್ವೀಟಿಸಿದ್ದರು.
ಮಗನ ಸಾವನ್ನು ಅಣಕಿಸುವಂತೆ ಟೀಕಿಸಿರುವ ಪ್ರತಾಪ್ಸಿಂಹ ಅವರಿಗೆ ವಿವರಣೆ ಕೇಳಿ ರಾಜ್ ಲೀಗಲ್ ನೋಟಿಸ್ ನೀಡಿದ್ದರು.
ಆದರೆ,ಅದಕ್ಕೆ ಸರಿಯಾಗಿ ಉತ್ತರಿಸದಿದ್ದರಿಂದ ರೈ ಅವರು ಕಳೆದ ವರ್ಷ ಫೆ.27ರಂದು ಮೈಸೂರಿನ ನಾಲ್ಕನೇ ಜೆಎಂಎಫ್ ನ್ಯಾಯಾಲಯದಲ್ಲಿ ಕೇವಲ ಒಂದು ರೂ. ಪರಿಹಾರ ನೀಡುವಂತೆ ಕೋರಿ ಪ್ರತಾಪ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.