ನಾಡಹಬ್ಬ ದಸರಾ ಮಹೋತ್ಸವಕ್ಕೆ ಇಂದು ಅಧಿದೇವತೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ವಿದ್ಯುಕ್ತ ಚಾಲನೆ ಸಿಗಲಿದೆ. ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ದಸರಾ ಉದ್ಘಾಟಿಸಲಿದ್ದು  ನವರಾತ್ರಿ ಸಂಭ್ರಮಕ್ಕೆ ಅರಮನೆ ನಗರಿ ಸಜ್ಜಾಗಿದೆ.

ಮೈಸೂರು(ಸೆ.21): ಮೈಸೂರು ದಸರಾ ನಾಡಹಬ್ಬ ದಸರಾ ಬತ್ತೆ ಬಂದೇಬಿಡ್ತು ನೋಡಿ, ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಇಂದು ಗಣ್ಯರ ಸಮ್ಮುಖದಲ್ಲಿ ತಾಯಿ ಚಾಮುಂಡಿಗೆ ಪುಷ್ಪಾರ್ಚನೆ ಮಾಡೋ ಮೂಲಕ ನವರಾತ್ರಿ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 8.45ರ ಶುಭ ತುಲಾ ಲಗ್ನದಲ್ಲಿ ಸಂಭ್ರಮದ ನಾಡಹಬ್ಬಕ್ಕೆ ಚಾಲನೆ ಸಿಗಲಿದೆ.

Add Asianetnews Kannada as a Preferred SourcegooglePreferred

ಇನ್ನೂ ಇವತ್ತು ಚಾಮುಂಡಿ ತಾಯಿಗೆ ರುದ್ರಾಭೀಷೇಕ, ಪಂಚಾಮೃತಾಭಿಷೇಕ. ನವರಾತ್ರಿ ಯಂತ್ರಾರ್ಚನೆ, ಬಳಿಕ ಸಿಎಂ ಸೇರಿದಂತೆ ಪ್ರಮುಖರ ಸಮ್ಮುಖದಲ್ಲಿ ಚಾಮುಂಡಿಯ ಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತೆ. ಇದಾದ ಬಳಿಕ ರಥದಲ್ಲಿ ಉತ್ಸವ ಮೂರ್ತಿಯನ್ನ ಉದ್ಘಾಟನಾ ಸ್ಥಳಕ್ಕೆ ತಂದು ಪೂಜಿಸಿದ ಬಳಿಕ ನಾಡ ಹಬ್ಬ ದಸರಾಗೆ ಚಾಲನೆ ನೀಡಲಾಗುತ್ತೆ.

ಇನ್ನೂ ನಾಡ ಹಬ್ಬಕ್ಕೆ ಜಿಲ್ಲಾಡಳಿತ ಈಗಾಗಲೇ ಸರ್ವ ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದ್ದು, ಯಾವುದೇ ತೊಂದರೆಯಾಗದಂತೆ ನಿಗಾವಹಿಸಿದೆ. ಚಾಮುಂಡಿಬೆಟ್ಟದಲ್ಲಿ ದಸರಾಗೆ ಚಾಲನೆ ಸಿಗುತ್ತಲೇ ಇತ್ತ ಪದ್ಧತಿಯಂತೆ ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭವಾಗಲಿದೆ. ರಾಜಕುಮಾರ ಯದುವೀರ್ ಒಡೆಯರ್ ಮಧ್ಯಾಹ್ನ 12 ಗಂಟೆಗೆ ರತ್ನಖಚಿತ ಸಿಂಹಾಸವನ್ನೇರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಈ ವೇಳೆ ಪತ್ನಿ ತ್ರಿಷಿಕಾ ಕುಮಾರಿ ಸಹ ಭಾಗವಹಿಸಲಿದ್ದಾರೆ.

ಇದೆಲ್ಲದರ ಜೊತೆಗೆ ವಸ್ತು ಪ್ರದರ್ಶನ ಆವರಣದಲ್ಲಿರುವ ಕುಸ್ತಿ ಪಂದ್ಯಾವಳಿ, ಕಲಾಮಂದಿರದ ಚಲನಚಿತ್ರೋತ್ಸವ, ದಸರಾ ವಸ್ತು ಪ್ರದರ್ಶನಗಳಿಗೂ ಸಹ ಚಾಲನೆ ಸಿಗಲಿದೆ. ಒಟ್ಟಿನಲ್ಲಿ ಇಂದಿನಿಂದ ಅರಮನೆ ನಗರಿ ಮೈಸೂರಲ್ಲಿ ಸಂಭ್ರಮ ಮನೆ ಮಾಡಲಿದೆ.