ಐಟಿ ಕಂಪನಿಗಳು ಭಾರಿ ಪ್ರಮಾಣದಲ್ಲಿ ವೇತನ ಹೆಚ್ಚಳ ನಿಲ್ಲಿಸದಿದ್ದರೆ ಕಾದಿದೆ ಅಪಾಯ
ಸಿಇಒಗಳು ಒಳಗೊಂಡು ಪ್ರತಿಯೊಬ್ಬರು ಕಂಪನಿಗಳು ಹಾಗೂ ಉದ್ಯಮದ ಹಿತದೃಷ್ಟಿಯಿಂದ ತ್ಯಾಗಕ್ಕೆ ಸಿದ್ದರಾಗಬೇಕು. ಆಗ ಮಾತ್ರ ಉದ್ಯಮಗಳು ಏಳಿಗೆ ಸಾಧ್ಯವಾಗುತ್ತವೆ'
ಮುಂಬೈ(ಡಿ.23): ಐಟಿ ಕಂಪನಿಗಳು ಭಾರಿ ಪ್ರಮಾಣದಲ್ಲಿ ವೇತನ ಹೆಚ್ಚಳ ಮಾಡುವುದನ್ನು ನಿಲ್ಲಿಸದಿದ್ದರೆ ಉದ್ಯಮದ ಕುಸಿತಕ್ಕೆ ಕಾರಣವಾಗಬಹುದು ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ್ ಮೂರ್ತಿ ಎಚ್ಚರಿಸಿದ್ದಾರೆ
ಐಐಟಿ ಮುಂಬೈ ಆಯೋಜಿಸಿದ್ದ ವಾರ್ಷಿಕ ಕಲಾ ಉತ್ಸವದಲ್ಲಿ ಹಮ್ಮಿಕೊಂಡಿದ್ದ ಚರ್ಚಾಕೂಟದಲ್ಲಿ ಮಾತನಾಡಿದ ಅವರು, ಬಹುತೇಕ ಕಂಪನಿಗಳು ಹಿರಿಯ ಹುದ್ದೆಯಲ್ಲಿರುವವರಿಗೆ ಶೇ.300, 500 ಹಾಗೂ 1000 ರಷ್ಟು ವೇತನವನ್ನು ಹೆಚ್ಚು ಮಾಡುತ್ತವೆ. ಸಿಇಒಗಳು ಒಳಗೊಂಡು ಪ್ರತಿಯೊಬ್ಬರು ಕಂಪನಿಗಳು ಹಾಗೂ ಉದ್ಯಮದ ಹಿತದೃಷ್ಟಿಯಿಂದ ತ್ಯಾಗಕ್ಕೆ ಸಿದ್ದರಾಗಬೇಕು. ಆಗ ಮಾತ್ರ ಉದ್ಯಮಗಳು ಏಳಿಗೆ ಸಾಧ್ಯವಾಗುತ್ತವೆ' ಎಂದು ಮೂರ್ತಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಐಟಿ ವಲಯದಲ್ಲಿ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಕಡಿತದ ಬಗ್ಗೆ ಮಾತನಾಡಿದ ಅವರು, ಇದು ಐಟಿ ವಲಯಕ್ಕೆ ಆಗಮಿಸುವ ಐಐಟಿ ಪದವೀಧರರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ' ಎಂದು ಹೇಳಿದರು. ಐಟಿ ವಲಯ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಐಐಟಿ ಬಿಯಿಂದ ಶೇ.32 ಉದ್ಯೋಗವನ್ನು ಆಫರ್ ಮಾಡಿರುವುದನ್ನು ಉಲ್ಲೇಖಿಸಲಾಯಿತು.
ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ಈ ಮೊದಲು ನಿರುದ್ಯೋಗ ಹೆಚ್ಚು ಶಿಕ್ಷಣ ಪಡೆಯವದವರಲ್ಲಿ ಮಾತ್ರ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಐಐಟಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಪದವೀಧರರನ್ನು ಒಳಗೊಂಡಂತೆ ಯುವಕರಲ್ಲಿ ನಿರುದ್ಯೋಗ ಭೀತಿ ಹೆಚ್ಚಿಸಿದೆ. ಐಐಟಿ ಹಾಗೂ ಐಐಎಂ ಪದವೀಧರರು ಉದ್ಯೋಗ ಪಡೆಯಲು ಕಷ್ಟವಾಗುತ್ತಿದ್ದರೆ ಉದ್ಯೋಗ ಮಾರುಕಟ್ಟೆಯಲ್ಲಿ ಗಂಭೀರವಾದ ತಪ್ಪು ಇದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು ಎಂದು' ತಿಳಿಸಿದರು.