ಬಿಜೆಪಿ ಕಾರ್ಪೊರೇಟರ್ ಪತಿ ಕದಿರೇಶ್ ಹತ್ಯೆಗೆ ಪ್ರತಿಕಾರವಾಗಿ ಮತ್ತೊಂದು ಮರ್ಡರ್..
ಇತ್ತೀಚಿಗೆ ನಡೆದಿದ್ದ ಛಲವಾದಿಪಾಳ್ಯ ಬಿಬಿಎಂಪಿ ಬಿಜೆಪಿ ಸದಸ್ಯೆ ರೇಖಾ ಅವರ ಪತಿ ಕದಿರೇಶ್ ಕೊಲೆಗೆ ಪ್ರತೀಕಾರವಾಗಿ ವಿರೋಧಿ ಗುಂಪಿನ ಯುವಕನೊಬ್ಬನನ್ನು ಕದಿರೇಶ್ ಬೆಂಬಲಿಗರು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.
ಬೆಂಗಳೂರು: ಇತ್ತೀಚಿಗೆ ನಡೆದಿದ್ದ ಛಲವಾದಿಪಾಳ್ಯ ಬಿಬಿಎಂಪಿ ಬಿಜೆಪಿ ಸದಸ್ಯೆ ರೇಖಾ ಅವರ ಪತಿ ಕದಿರೇಶ್ ಕೊಲೆಗೆ ಪ್ರತೀಕಾರವಾಗಿ ವಿರೋಧಿ ಗುಂಪಿನ ಯುವಕನೊಬ್ಬನನ್ನು ಕದಿರೇಶ್ ಬೆಂಬಲಿಗರು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.
ಫ್ಲೈವರ್ ಗಾರ್ಡನ್ ನಿವಾಸಿ ಶೋಭನ್ (19) ಕೊಲೆಯಾದ ದುರ್ದೈವಿ. ತನ್ನ ಮನೆ ಸಮೀಪ ಬುಧವಾರ ಮಧ್ಯಾಹ್ನ 3.30ರ ವೇಳೆ ನಿಂತಿದ್ದ ಶೋಭನ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತಕ್ಷಣವೇ ಗಾಯಾಳವನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ರಾತ್ರಿ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಶೋಭನ್ ಕೆ.ಆರ್. ಮಾರ್ಕೆಟ್ನಲ್ಲಿ ಕೊತ್ತಂಬರಿ ಸೊಪ್ಪಿನ ವ್ಯಾಪಾರಿ ಆಗಿದ್ದು, ತನ್ನ ಕುಟುಂಬದ ಜತೆ ಪ್ಲೈವರ್ ಗಾರ್ಡನ್ನಲ್ಲಿ ಆತ ವಾಸವಾಗಿದ್ದ. ಫೆ.೭ರಂದು ಸ್ಥಳೀಯ ಬಿಬಿಎಂಪಿ ಸದಸ್ಯೆ ರೇಖಾ ಅವರ ಪತಿ ಕದಿರೇಶ್ ಅವರ ಕೊಲೆಯಾಗಿತ್ತು. ಈ ಹತ್ಯೆ ನಡೆದ ದಿನ ಹಂತಕರಿಗೆ ಕದಿರೇಶ್ ಚಲನವಲನದ ಕುರಿತು ಮಾಹಿತಿ ನೀಡಿದ್ದ ಎಂದು ಮೃತ ಕದಿರೇಶ್ ಅವರ ಕೆಲ ಸಂಬಂಧಿಕರು ಹಾಗೂ ಬೆಂಬಲಿಗರು ಶೋಭನ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.
ಈ ಹಗೆತನದ ಹಿನ್ನೆಲೆಯಲ್ಲೇ ಶೋಭನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಆರೋಪಿಗಳು ಕೊಲೆ ಮಾಡಿದ್ದಾರೆ. ಈ ಸಂಬಂಧ ಕಾಟನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.