ಪ್ರಸಾದದಲ್ಲಿ ಬೆರೆತ ವಿಷ ಅಮಾಯಕರ ಪ್ರಾಣವನ್ನೇ ಬಲಿಪಡೆದಿದೆ. ಹಾಗಾದರೂ ಈ ಪ್ರಸಾದದಲ್ಲಿ ಬೆರೆತಿದ್ದ ವಿಷ ಯಾವುದು? ಅದರ ಪರಿಣಾಮ ಎಷ್ಟು ದಿನಗಳ ವರೆಗೆ ಇರುತ್ತದೆ? ಎಂಬೆಲ್ಲ ಮಾಹಿತಿಯನ್ನು ಅನಿವಾರ್ಯವಾದರೂ ನೀಡಲೇಬೇಕಾಗಿದೆ.

ಚಾಮರಾಜನಗರ[ಡಿ.18] ಸುಳ್ವಾಡಿ ಮಾರಮ್ಮ ದೇವರ ವಿಷ ಪ್ರಸಾದ ದುರಂತ ಪ್ರಕರಣದ ನೋವು ಮಾತ್ರ ಸದ್ಯಕ್ಕೆ ಮರೆಯಾಗುವುದೇ ಅಲ್ಲ. ನೊಂದ ಕುಟುಂಬಗಳಿಗೆ ಕಣ್ಣೀರಿನ ಕತೆ ಮರೆಯಲು ವರ್ಷಗಳೆ ಹಿಡಿದಾವು.

Add Asianetnews Kannada as a Preferred SourcegooglePreferred

ದುರಂತಕ್ಕೆ ಕಾರಣವಾದ ಪ್ರಸಾದದಲ್ಲಿ ಬೆರೆತ ವಿಷವಾದರೂ ಯಾವುದು? ಪ್ರಸಾದದಲ್ಲಿ ಬೆರೆತಿದ್ದ ಮೊನೋಕ್ರೊಟೊಪಾಸ್ ವಿಷದ ಪ್ರಭಾವ ಎಂಥದ್ದು? ಪ್ರಸಾದದಲ್ಲಿ ಬೆರೆತಿದ್ದು ಆರ್ಗನೋಫಾಸ್‌ಪರಸ್ ವಿಷದ ಗುಂಪಿಗೆ ಸೇರಿದ ವಿಷ. ಇದನ್ನು ಸೇವಿಸಿದ ಕೆಲವೇ ನಿಮಿಷದಲ್ಲಿ ಜಠರದ ಮೂಲಕ ರಕ್ತಗತವಾಗುತ್ತೆ. ನರ ಹಾಗೂ ಸ್ನಾಯು ಸಂಧಿಸುವ ಜಾಗದಲ್ಲಿ ಸೇರಿಕೊಳ್ಳುವ ವಿಷ ಅಂಗಾಂಗವ್ಯೂಹವನ್ನೇ ಬಲಿ ಪಡೆಯುತ್ತದೆ.

ಉಸಿರಾಟದ ಸ್ನಾಯುಗಳು ವಿಫಲವಾಗಿ ಉಸಿರಾಟದ ತೊಂದರೆಯಿಂದ ರೋಗಿ ಸಾವನ್ನಪ್ಪುತ್ತಾನೆ. ದೇಹದ ಕೊಬ್ಬಿನಂಶಕ್ಕೆ ಸೇರಿಕೊಳ್ಳುವ ಮೋನೋಕ್ರೋಟೊಪಾಸ್ ಕಂತು ಕಂತುಗಳಲ್ಲಿ ಬಿಡುಗಡೆ ಆಗುತ್ತೆ. ಹಾಗಾಗಿ ಕನಿಷ್ಠ 20 ದಿನಗಳು ರೋಗಿಗಳ ಸ್ಥಿರತೆ ಬಗ್ಗೆ ನಿಖರವಾಗಿ ನಿಗಾ ಇಡಬೇಕು. ಈ ವಿಷ ಹೊಟ್ಟೆ ಸೇರಿದರೆ ನರದೌರ್ಬಲ್ಯ ಕಾಡುತ್ತದೆ. ಚೇತರಿಸಿಕೊಂಡ ನಂತರವೂ 8 ವರ್ಷ ಮನುಷ್ಯನನ್ನು ಈ ವಿಷದ ಪರಿಣಾಮ ಕಾಡಲಿದೆ.

15 ದಿನವಾದರೂ ತೀರ್ಪಿಗೆ ಬರುವುದೇ ಕಷ್ಟ. ಈ ವೇಳೆ ಹೃದಯವೂ ತೊಂದರೆಗೆ ಒಳಗಾಗಬಹುದು,ಕಿಡ್ನಿಯೂ ಫೇಲ್ ಆಗಬಹುದು. ಈ ಸಂದರ್ಭದಲ್ಲಿ ಅಂಗಾಗಗಳು ಶಾಶ್ವತವಾಗಿ ತೊಂದರೆಗೊಳಗಾಗಿದ್ದರೆ ಅದೇ ಸ್ಥಿತಿ ಮುಂದುವರೆಯುತ್ತದೆ. ಯಾವ ಪಾಪಿಗಳು ಇಂಥ ವಿಷವನ್ನು ಪ್ರಸಾದಕ್ಕೆ ಬೆರೆಸಿದರೋ.. ಅಮಾಯಕರು ಮಾತ್ರ ಪ್ರತಿದಿನ ಕಷ್ಟಪಡಲೇಬೇಕಾಗಿದೆ.