ಪೇಪರ್ ಕ್ಲಿಪ್'ಗಳಿಂದ ಹಿಡಿದು ಗೇರ್, ಟರ್ಬೈನ್ ಮೊದಲಾದ ವಸ್ತುಗಳವರೆಗೂ ಎಲ್ಲವನ್ನೂ ಆನ್'ಲೈನ್'ನಲ್ಲೇ ಖರೀದಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹಾಗೂ ಪಾರದರ್ಶಕ ವ್ಯವಸ್ಥೆ ನಿರ್ಮಿಸಲು ಸಹಾಯಕವಾಗುತ್ತದೆ ಎಂದು ಕೇಂದ್ರ ಸರಕಾರದ ವಾಣಿಜ್ಯ ಇಲಾಖೆಯ ಅಧಿಕಾರಿ ರೀಟಾ ತಿಯೋಟಿಯಾ ಅಭಿಪ್ರಾಯಪಡುತ್ತಾರೆ.

ನವದೆಹಲಿ(ಡಿ. 01): ನೋಟ್ ನಿಷೇಧದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಮಹತ್ವದ ಹೆಜ್ಜೆಯನ್ನಿಡಲು ಸಜ್ಜಾಗಿದ್ದಾರೆ. ಕೇಂದ್ರ ಸರಕಾರದ ಮೂಲಗಳ ಪ್ರಕಾರ ಸರಕಾರದ ವಿವಿಧ ಇಲಾಖೆಗಳ ಖರೀದಿ ವ್ಯವಹಾರವೆಲ್ಲವನ್ನೂ ಆನ್'ಲೈನ್ ಮಾಡಲು ಮೋದಿ ನಿರ್ಧರಿಸಿದ್ದಾರೆ. ಇದರೊಂದಿಗೆ ದೇಶದ ಜಿಡಿಪಿಯ ಶೇ.20ರಷ್ಟು ಆರ್ಥಿಕತೆಯು ಕ್ಯಾಷ್'ಲೆಸ್ ಆಗಲಿದೆ. ಹಲವು ತಜ್ಞರ ಪ್ರಕಾರ ಇದು ವಿಶ್ವದ ಅತ್ಯುತ್ತಮ ಖರೀದಿ ವ್ಯವಸ್ಥೆಯಾಗಲಿದೆಯಂತೆ. ಸದ್ಯಕ್ಕೆ ರಕ್ಷಣಾ ಇಲಾಖೆ ಮತ್ತು ರೈಲ್ವೆ ಇಲಾಖೆಗಳನ್ನು ಹೊರತುಪಡಿಸಿ ಬಹುತೇಕ ಇಲಾಖೆಗಳು ಈ ಇ-ಮಾರುಕಟ್ಟೆಯ ಭಾಗವಾಗಿವೆ. ಮುಂದಿನ ದಿನಗಳಲ್ಲಿ ಈ ಎರಡೂ ಬೃಹತ್ ಇಲಾಖೆಗಳನ್ನು ಆನ್'ಲೈನ್ ವ್ಯವಸ್ಥೆಯಡಿ ತರುವ ಪ್ರಯತ್ನವಾಗಲಿದೆ.

ಈಗಾಗಲೇ ಬೃಹತ್ ಇ-ಮಾರುಕಟ್ಟೆಯ ಜಾಲತಾಣ ನಿರ್ಮಾಣವಾಗಿದ್ದು, ವಿವಿಧ ಇಲಾಖೆಗಳ ಸಿಬ್ಬಂದಿಗೆ ತರಬೇತಿಯನ್ನೂ ನೀಡಲು ಆರಂಭಿಸಲಾಗಿದೆ. ಈ ವೆಬ್'ತಾಣ ಸದ್ಯ ನೋಡಲು ಅಮೇಜಾನ್, ಫ್ಲಿಪ್'ಕಾರ್ಟ್ ಮೊದಲಾದ ಇ-ಕಾಮರ್ಸ್ ವೆಬ್'ಸೈಟ್'ಗಳಂತೆ ಇದೆ. ಪೇಪರ್ ಕ್ಲಿಪ್'ಗಳಿಂದ ಹಿಡಿದು ಗೇರ್, ಟರ್ಬೈನ್ ಮೊದಲಾದ ವಸ್ತುಗಳವರೆಗೂ ಎಲ್ಲವನ್ನೂ ಆನ್'ಲೈನ್'ನಲ್ಲೇ ಖರೀದಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹಾಗೂ ಪಾರದರ್ಶಕ ವ್ಯವಸ್ಥೆ ನಿರ್ಮಿಸಲು ಸಹಾಯಕವಾಗುತ್ತದೆ ಎಂದು ಕೇಂದ್ರ ಸರಕಾರದ ವಾಣಿಜ್ಯ ಇಲಾಖೆಯ ಅಧಿಕಾರಿ ರೀಟಾ ತಿಯೋಟಿಯಾ ಅಭಿಪ್ರಾಯಪಡುತ್ತಾರೆ.

ಈಗಿರುವ ವ್ಯವಸ್ಥೆ ಹೇಗೆ?
ವಿವಿಧ ಸರಕಾರೀ ಇಲಾಖೆಗಳು ಹಾಗೂ ಕಾರ್ಖಾನೆಗಳಲ್ಲಿ ಖರೀದಿಗಾಗಿ ಟೆಂಡರ್ ವ್ಯವಸ್ಥೆ ಇದೆ. ಇಲ್ಲಿ ಸ್ಥಳೀಯ ಸರಬರಾಜುದಾರರ ಪಾತ್ರ ಬಹಳ ಮಹತ್ವ ವಹಿಸುತ್ತದೆ. ಪ್ರಭಾವ ಬೀರುವುದು ಸೇರಿದಂತೆ ಭ್ರಷ್ಟಾಚಾರಕ್ಕೆ ಆಸ್ಪದವಾಗುವಂತಹ ಸಂಗತಿಗಳೇ ಹೆಚ್ಚು. ಆದರೆ, ಎಲ್ಲವನ್ನೂ ಆನ್'ಲೈನ್ ಮಾಡಿದರೆ ಇಡೀ ವ್ಯವಸ್ಥೆ ಪಾರದರ್ಶಕವಾಗುತ್ತದೆ. ವೆಂಡರ್'ಗಳಿಗೆ 10 ದಿನಗಳಲ್ಲಿ ಪೇಮೆಂಟ್ ಕೊಡುವ ಯೋಜನೆಯೂ ಇದೆ. ಇದರಿಂದ ಮಾರಾಟಗಾರರು ಹಣದ ಪಾವತಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಭ್ರಷ್ಟಾಚಾರಕ್ಕೆ ಬಹುತೇಕ ಕಡಿವಾಣ ಬಿದ್ದಂತಾಗುತ್ತದೆ ಎಂಬುದು ಇ-ಮಾರುಕಟ್ಟೆ ಸಮರ್ಥಕರ ಅಭಿಪ್ರಾಯವಾಗಿದೆ.

ಅಪಾಯವೂ ಇದೆ:
ಉದ್ದೇಶಿತ ಇ-ಮಾರುಕಟ್ಟೆಯಲ್ಲಿ ಬಿಡ್ ಸಲ್ಲಿಸಲು ವೈಯಕ್ತಿಕ ಮೊಬೈಲ್ ನಂಬರು ಮತ್ತು ಆಧಾರ್ ಬಯೋಮೆಟ್ರಿಕ್ ಕಾರ್ಡ್'ನ ವಿವರಗಳನ್ನು ನೀಡಬೇಕಾದ ಅಗತ್ಯ ಇದೆ. ಇಲಾಖೆಯ ಖರೀದಿ ಮಾಡಲು ವೈಯಕ್ತಿಕ ಆಧಾರ ಕಾರ್ಡ್'ನ ವಿವರ ನೀಡಬೇಕಾಗುತ್ತದೆ. ಇದರಿಂದಾಗಿ ತಮ್ಮ ವೈಯಕ್ತಿಕ ವಿವರಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದ್ದೇ ಇರುತ್ತದೆ. ಸರಕಾರ ಈ ಬಗ್ಗೆ ಯೋಚನೆ ಮಾಡಬೇಕಿತ್ತು ಎಂದು ದಿಲ್ಲಿಯ ಸರಕಾರ ಆಸ್ಪತ್ರೆಯ ಉದ್ಯೋಗಿ ರಾಜೇಶ್ ಕೊಹ್ಲಿ ಹೇಳುತ್ತಾರೆ.

ಅಷ್ಟೇ ಅಲ್ಲ, ಇ-ಮಾರುಕಟ್ಟೆ ನಿರ್ಮಾಣದಿಂದ ಬೃಹತ್ ಪ್ರಮಾಣದ ಡೇಟಾ ಸೃಷ್ಟಿಯಾಗುತ್ತದೆ. ಈ ಡೇಟಾಗಳ ಸುರಕ್ಷತೆಗೆ ಸರಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದು ಮುಖ್ಯ ಎಂದು ಕೆಲ ಉದ್ಯಮಿಗಳು ಅಭಿಪ್ರಾಯಪಡುತ್ತಾರೆ.

(ಮಾಹಿತಿ: ಅರ್ಚನಾ ಚೌಧರಿ)