ಕಾಶ್ಮೀರ ರಕ್ತಪಾತಕ್ಕೆ ಮೋದಿ ಸರ್ಕಾರವೇ ಹೊಣೆ: ಶಿವಸೇನೆ..!
ಕಾಶ್ಮೀರ ರಕ್ತಪಾತಕ್ಕೆ ಮೋದಿ ಸರ್ಕಾರವೇ ಹೊಣೆ ಎಂದ ಶಿವಸೇನೆ
ರಂಜಾನ್ ತಿಂಗಳಲ್ಲಿ ಕದನವಿರಾಮ ಘೋಷಣೆ ತಪ್ಪು
ಭಯೋತ್ಪಾದಕರ ವಿರುದ್ದದ ಕಾರ್ಯಾಚರಣೆ ನಿಲ್ಲಿಸಿದ್ದಕ್ಕೆ ಗರಂ
ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ತರಾಟೆ
ಮುಂಬೈ(ಜೂ.16): ಕಾಶ್ಮೀರದಲ್ಲಿ ನಡೆಯುತ್ತಿರುವ ಸರಣಿ ಹತ್ಯೆ, ರಕ್ತಪಾತಗಳ ಬಗ್ಗೆ ಎನ್ ಡಿಎ ಮಿತ್ರಪಕ್ಷ ಶಿವಸೇನೆ ಮೋದಿ ಸರ್ಕಾರದತ್ತ ಬೊಟ್ಟು ಮಾಡಿದೆ. ಕಾಶ್ಮೀರ ಅಶಾಂತಿಯ ಬೀಡಾಗಲು ಮೋದಿ ಸರ್ಕಾರದ ಅಪಕ್ವ ನೀತಿಗಳೇ ಕಾರಣ ಎಂದು ಶಿವಸೇನೆ ದೂರಿದೆ.
ಈ ಕುರಿತು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆಯುಲಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ರಂಜಾನ್ ತಿಂಗಳಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ನಡೆಸದಿರಲು ನಿರ್ಧರಿಸಿದ್ದರ ಬಗ್ಗೆ ಶಿವಸೇನೆ ಆಕ್ಷೇಪ ವ್ಯಕ್ತಪಡಿಸಿದೆ. ಭಾರತದ ಈ ನಿರ್ಧಾರದಿಂದ ಪಾಕಿಸ್ತಾನ ಅನುಚಿತ ಲಾಭ ಪಡೆಯಲು ಯತ್ನಿಸಿದೆ ಎಂದು ಶಿವಸೇನೆ ಆರೋಪಿಸಿದೆ.
ಭಯೋತ್ಪಾದಕರು ನಡೆಸಿರುವ ರಕ್ತಪಾತಕ್ಕೆ ಕೇಂದ್ರ ಸರ್ಕಾರದ ನಿರ್ಧಾರವೇ ಕಾರಣವಾಗಿದೆ. ನಮ್ಮ ಸರ್ಕಾರ ರಂಜಾನ್ ತಿಂಗಳಲ್ಲಿ ಸೇನಾ ದಾಳಿ ನಡೆಸದಿರಲು ತೀರ್ಮಾನಿಸಿತ್ತು. ಆದರೆ ಪಾಕಿಸ್ತಾನ ಅದಕ್ಕೆ ಪೂರಕವಾಗಿ ನಡೆದುಕೊಂಡಿಲ್ಲ ಎಂದು ಸಂಪಾದಕೀಯದಲ್ಲಿ ಕಿಡಿಕಾರಲಾಗಿದೆ. ಕಾಶ್ಮೀರದಲ್ಲಿ ರಕ್ತಪಾತ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಿವಸೇನೆ ಅಸಮಾಧಾನ ವ್ಯಕ್ತಪಡಿಸಿದೆ.