ದಲಿತರ ಪಾಲಿಗೆ ಮನಮೋಹನ್ ಸಿಂಗ್ ಸರ್ಕಾರಕ್ಕಿಂತ ಮೋದಿ ಸರ್ಕಾರ ಉತ್ತಮ: ದಲಿತರ ಸಂಸ್ಥೆ
- ದಲಿತರ ಸಂಸ್ಥೆಯಿಂದ ಮೋದಿ ಸರ್ಕಾರಕ್ಕೆ ಶಹಬ್ಬಾಸ್ಗಿರಿ
- ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಿಂದ ದಲಿತ ಯುವಜನರಿಗೆ ಪ್ರಯೋಜನ
- ಯೋಜನೆ ರೂಪಿಸುವುದರಿಂದ ಹಿಡಿದು ಜಾರಿಗೊಳಿಸುವವರೆಗೂ ಮೋದಿ ಸರ್ಕಾರಕ್ಕೆ ಮೇಲುಗೈ
ನವದೆಹಲಿ: ನರೇಂದ್ರ ಮೋದಿ ಸರ್ಕಾರವು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಿಂದ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ದಲಿತ ಸಂಸ್ಥೆಯು ಅಭಿಪ್ರಾಯಪಟ್ಟಿದೆ.
ಮೋದಿ ಆಡಳಿತದಲ್ಲಿ ದಲಿತರ ಅಭಿವೃದ್ಧಿಗೆ ಅತೀ ಹೆಚ್ಚು ಕೆಲಸವಾಗಿದೆ, ಎಂದು ದಲಿತ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ [DICCI] ಅಧ್ಯಕ್ಷ ಮಿಲಿಂದ್ ಕಾಂಬ್ಳೆ ಹೇಳಿದ್ದಾರೆ.
ದಲಿತರ ಶ್ರೇಯೋಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದರಿಂದ ಹಿಡಿದು, ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸುವವರೆಗೂ, ನರೇಂದ್ರ ಮೋದಿ ಸರ್ಕಾರವು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕಿಂತ ಉತ್ತಮವಾಗಿ ಕೆಲಸ ಮಾಡಿದೆಯೆಂದು ಕಾಂಬ್ಳೆ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮುದ್ರಾ ಯೋಜನೆಯನ್ನು ಪ್ರಶಂಸಿಸಿದ ಕಾಂಬ್ಳೆ, ಆರ್ಥಿಕ ಒಳಗೊಳ್ಳುವಿಕೆಯ ದೃಷ್ಟಿಯಿಂದ ಈ ಯೋಜನೆ ಬಹಳ ಮಹತ್ವಕಾರಿಯಾಗಿದೆ; ಈ ಯೋಜನೆಯಿಂದ ಸುಮಾರು 2.75 ಕೋಟಿ ದಲಿತ ಯುವಜನರು ಪ್ರಯೋಜನ ಪಡೆದಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಬಹಿರಂಗಪಡಿಸಿದ್ದಾರೆ.
ದೇಶದಲ್ಲಿ 19 ಕೋಟಿ ಸುಶಿಕ್ಷಿತ ದಲಿತ ಯುವಜನರಿದ್ದಾರೆ. ಇವರೆಲ್ಲರಿಗೂ ಉದ್ಯೋಗ ನೀಡಲು ಯಾವ ಸರ್ಕಾರದಿಂದಲೂ ಸಾಧ್ಯವಿಲ್ಲ. ಆದ್ದರಿಂದ, ವ್ಯಾಪಾರ-ವಹಿವಾಟು ನಡೆಸಲು ಈ ಯುವಕರನ್ನು DICCI ಪ್ರೋತ್ಸಾಹ ನೀಡುತ್ತಿದೆ. ಈಗಾಗಲೇ ಲಕ್ಷಾಂತರ ಮಂದಿ ವ್ಯಾಪಾರರಂಗಕ್ಕಿಳಿದಿದ್ದಾರೆ, ಎಂದು ಅವರು ತಿಳಿಸಿದ್ದಾರೆ.