ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಯಾವುದೇ ಅಧಿಕಾರಿಗಳೂ ಕೂಡ ವರ್ಗಾವಣೆಯನ್ನು ಬಯಸಿ ತಮ್ಮ ಕಚೇರಿಗೆ ಬಾರದಂತೆ ಸೂಚನೆ ನೀಡಿದ್ದಾರೆ. 

ಬೆಂಗಳೂರು : ತೆರಿಗೆ ರೂಪದಲ್ಲಿ ಸಂಗ್ರಹವಾಗುವ ಸಾರ್ವಜನಿಕರ ಹಣ ದುಂದುವೆಚ್ಚ ಆಗದಂತೆ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಇಲಾಖೆ ಅಕಾರಿಗಳಿಗೆ ಸೂಚಿಸಿದ್ದಾರೆ.

Add Asianetnews Kannada as a Preferred SourcegooglePreferred

ನಗರದಲ್ಲಿ ನಡೆದ ಅಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದ ಎಲ್ಲ ಅಕಾರಿಗಳು ಪ್ರತಿ ತಿಂಗಳು ತಾವು ನಿರ್ವಹಿಸಿದ ಕರ್ತವ್ಯಗಳ ಮಾಹಿತಿಯುಳ್ಳ ದಿನಚರಿಯನ್ನು ಸಲ್ಲಿಸಬೇಕು ಸೂಚನೆ ನೀಡಿದರು. ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಸಮಗ್ರವಾಗಿ ಅನುಷ್ಠಾನ ಮಾಡಬೇಕು.

ಹೊಸ ಯೋಜನೆಗಳು ಸಮಾಜದ ಜನರಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಸಷ್ಟವಾಗಿ ತಿಳಿಸಿದರು. ಅಲ್ಲದೆ, ವರ್ಗಾವಣೆ ಕೋರಿ ತಮ್ಮ ಕಚೇರಿಗೆ ಬರುವ ಅಕಾರಿಗಳ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಇನ್ನು ಮುಂದೆ ಯಾವುದೇ ಅಧಿಕಾರಿಯು ವರ್ಗಾವಣೆ ಕೋರಿ ಕಚೇರಿಗೆ ಬರಬಾರದು ಎಂದು ಕಟ್ಟುನಿಟ್ಟಾಗಿ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಲಹೆಗಾರರಾದ ನಿವೃತ್ತ ಐಎಎ ಅಧಿಕಾರಿ ಇ.ವೆಂಕಟಯ್ಯ ಮಾತನಾಡಿ, ಸರ್ಕಾರದಿಂದ ಕಾಲ ಕಾಲಕ್ಕೆ ಬಿಡುಗಡೆಗೊಳ್ಳುವ ಸರ್ಕಾರಿ ಆದೇಶಗಳನ್ನು ಅಕಾರಿಗಳು ಓದಿ, ಮನನ ಮಾಡಿಕೊಂಡು ಕಾರ್ಯ ನಿರ್ವಹಿಸಲು ಮುಂದಾಗಬೇಕು ಎಂದರು. 

ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸಲು, ಬಂಜಾರ ಅಭಿವೃದ್ಧಿ ಮಂಡಲಿ ವ್ಯವಸ್ಥಾಪಕ ನಿರ್ದೇಶಕ ಹೀರಾಲಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಸಂಗಪ್ಪ, ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮಹೇಶ್ ಹಾಜರಿದ್ದರು.