ಸಿಎಂ ಕಚೇರಿ ಮೂಲಗಳ ಪ್ರಕಾರ, ಮೇಟಿ ರಾಜೀನಾಮೆಯ ಅಂಗೀಕಾರವಾಗಿದೆ.
ಬೆಂಗಳೂರು(ಡಿ. 14): ಉದ್ಯೋಗ ಅರಸಿ ಬಂದ ಮಹಿಳೆ ಜೊತೆ ತಾವು ರಾಸಲೀಲೆ ನಡೆಸಿದ ವಿಡಿಯೋ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆಯೇ ಅಬಕಾರಿ ಸಚಿವ ಹೆಚ್.ವೈ.ಮೇಟಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ಮೇಟಿಯವರು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ. ಸಿಎಂ ಕಚೇರಿ ಮೂಲಗಳ ಪ್ರಕಾರ, ಮೇಟಿ ರಾಜೀನಾಮೆಯ ಅಂಗೀಕಾರವಾಗಿದೆ.
ಆರ್'ಟಿಐ ಕಾರ್ಯಕರ್ತ ರಾಜಶೇಖರ್ ಇಂದು ಸಚಿವ ಮೇಟಿಯವರ ರಾಸಲೀಲೆ ವಿಡಿಯೋವನ್ನು ಮಾಧ್ಯಮಗಳಿಗೆ ನೀಡುವ ಮೂಲಕ ಬಹಿರಂಗಪಡಿಸಿದ್ದಾರೆ. 36 ನಿಮಿಷ 10 ಸೆಕೆಂಡ್ ವಿಡಿಯೋದಲ್ಲಿ ಮೇಟಿ ಆ ಮಹಿಳೆಯೊಂದಿಗೆ ಸರಸ ಸಲ್ಲಾಪ ನಡೆಸುತ್ತಿರುವ ದೃಶ್ಯವಿದೆ.
ವಿಜಯಲಕ್ಷ್ಮೀ ಎಂದು ಹೇಳಲಾಗುವ ಆ ಮಹಿಳೆ ಕೆಲ ದಿನಗಳ ಹಿಂದೆ ಮೇಟಿ ವಿರುದ್ಧ ಆರೋಪ ದಾಖಲಿಸಿದ್ದ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಆದರೆ, ರಾಸಲೀಲೆಯ ವಿಡಿಯೋ ಮಾತ್ರ ಬಹಿರಂಗವಾಗಿರಲಿಲ್ಲ. ಮೊನ್ನೆಯಷ್ಟೇ, ವಿಜಯಲಕ್ಷ್ಮೀ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರು. ಮೇಟಿಯವರು ತನಗೆ ತಂದೆ ಸಮಾನರು. ಅವರಿಂದ ತನಗೆ ಯಾವುದೇ ಅನ್ಯಾಯವಾಗಿಲ್ಲ. ಪೊಲೀಸ್ ಪೇದೆ ಸೇರಿ ಐವರು ವ್ಯಕ್ತಿಗಳು ಬಲವಂತವಾಗಿ ಮೇಟಿ ವಿರುದ್ಧ ಹೇಳಿಕೆ ದಾಖಲಿಸಿಕೊಂಡಿದ್ದರು ಎಂದು ಉಲ್ಟಾ ಹೊಡೆದಿದ್ದರು.
ಈಗ, ಪ್ರಕರಣಕ್ಕೆ ಮತ್ತೆ ಟ್ವಿಸ್ಟ್ ಸಿಕ್ಕಿದೆ. ಮೇಟಿ ರಾಜೀನಾಮೆ ನೀಡಿದ್ದಾರೆ. ರಾಜ್ಯ ಸರಕಾರದಲ್ಲಿ 3ನೇ ತಲೆದಂಡವಾದಂತಾಗಿದೆ.
