ಕುಂದಗೋಳದಲ್ಲಿ ಮೇ 19 ಕ್ಕೆ ಚುನಾವಣೆ
ಸಚಿವ ಶಿವಳ್ಳಿ ನಿಧನದಿಂದ ತೆರವಾಗಿದ್ದ ಕುಂದಗೋಳದಲ್ಲಿ ಮೇ 19ಕ್ಕೆ ಚುನಾವಣೆ | ನಾಮಪತ್ರ ಸಲ್ಲಿಕೆಗೆ ಏ.29 ಕೊನೇ ದಿನ | ಮೇ 23 ರಂದೇ ಫಲಿತಾಂಶ
ನವದೆಹಲಿ (ಏ. 10): ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರ ನಿಧನದಿಂದಾಗಿ ತೆರವಾಗಿದ್ದ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗವು ಪ್ರಕಟಿಸಿದೆ.
ಕುಂದಗೋಳದಲ್ಲಿ ಮೇ 19 ಕ್ಕೆ ಚುನಾವಣೆ ನಡೆಯಲಿದ್ದು ಫಲಿತಾಂಶವು ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುವ 23ರಂದೇ ಹೊರಬೀಳಲಿದೆ. ಚುನಾವಣಾ ಅಧಿಸೂಚನೆಯು ಏ.22 ಕ್ಕೆ ಪ್ರಕಟಗೊಂಡಿದ್ದು ನಾಮಪತ್ರ ಸಲ್ಲಿಸಲು ಏ.29 ಕೊನೆಯ ದಿನವಾಗಿರಲಿದೆ.
ಏ.30 ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮೇ 2ರವರೆಗೆ ಅವಕಾಶ ಇರಲಿದೆ. ಶಿವಳ್ಳಿ ಅವರು ಮಾರ್ಚ್ 22 ರಂದು ಹೃದಯಾಘಾತದಿಂದ ನಿಧನರಾಗಿದ್ದರು.
ಚಿಂಚೋಳಿ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಕಲಬುರಗಿ ಕ್ಷೇತ್ರದಿಂದ ಲಫಕಸಭಾ ಚುನಾವಣೆಗೆ ಬಿಜೆಪಿಯ ಉಮೇದುದಾರರಾಗಿ ಸ್ಪರ್ಧಿಸುತ್ತಿದ್ದಾರೆ. ಆದರೆ ಚಿಂಚೋಳಿ ಕ್ಷೇತ್ರಕ್ಕೆ ಉಪಚುನಾವಣೆಯನ್ನು ಆಯೋಗ ಪ್ರಕಟಿಸಿಲ್ಲ. ಕುಂದಗೋಳದೊಂದಿಗೆ ಗೋವಾದ ಒಂದು ಮತ್ತು ತಮಿಳುನಾಡಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.