ಅಂಚೆಯಲ್ಲಿ ಬರುತ್ತೆ ದಾಳಿಂಬೆ, ಅಂಜೂರ, ಹೂವು, ಸಸಿಗಳು!
ದಾಳಿಂಬೆ, ಸೀಬೆ, ಅಂಜೂರ, ಬೋರೆಹಣ್ಣಿನಂತಹ ಆರೋಗ್ಯಕರ ಹಣ್ಣುಗಳು, ಹೂವು ಮತ್ತು ಫೆಲನೋಪ್ಸಿಸ್ ಆರ್ಕಿಡ್ ಸಸಿಗಳನ್ನೂ ಅಂಚೆ ಇಲಾಖೆ ಸಹಯೋಗದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ.
ಬೆಂಗಳೂರು [ಅ.05]: ಮಾವು ಬೆಳೆಯುವ ರೈತರಿಗೆ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುತ್ತಿದ್ದ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆಮಂಡಳಿ ಇದೀಗ ದಾಳಿಂಬೆ, ಸೀಬೆ, ಅಂಜೂರ, ಬೋರೆಹಣ್ಣಿನಂತಹ ಆರೋಗ್ಯಕರ ಹಣ್ಣುಗಳು, ಹೂವು ಮತ್ತು ಫೆಲನೋಪ್ಸಿಸ್ ಆರ್ಕಿಡ್ ಸಸಿಗಳನ್ನೂ ಅಂಚೆ ಇಲಾಖೆ ಸಹಯೋಗದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಮುಂದಾಗಿದೆ.
ಹಣ್ಣು ಮತ್ತು ಹೂವುಗಳ ಮನೆ ಬಾಗಿಲಿಗೆ ತಲುಪಿಸುವ ಸಂಬಂಧ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆನಿಗಮವು ಭಾರತೀಯ ಅಂಚೆ ಇಲಾಖೆಯೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದು, ಅಕ್ಟೋಬರ್ 4 ರಿಂದ ಆನ್ಲೈನ್ನಲ್ಲಿ ಬುಕ್ ಮಾಡಲು ಅವಕಾಶ ಮಾಡಿಕೊಟ್ಟಿದೆ.
ಹೂವು ಮತ್ತು ಹಣ್ಣಗಳನ್ನು ತರಿಸಿಕೊಳ್ಳಬಯಸುವ ಗ್ರಾಹಕರು (www.karsirimangoes.karnataka.gov.in) ) ಈ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. (ಮನೆ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಕಡ್ಡಾಯ). ಈ ಪೋರ್ಟಲ್ನಲ್ಲಿ ನೋಂದಾಯಿತ ರೈತರ ವಿಭಾಗಗಳು ಲಭ್ಯವಿದ್ದು, ತಮಗಿಚ್ಚಿಸಿದ ರೈತರಿಂದ ದಾಳಿಂಬೆ, ಸೀಬೆ, ಅಂಜೂರ, ಆರ್ಕಿಡ್ ಹೂವಿನ ಫೋಟೋಗಳು ಆಯಾ ತಳಿಯ ಹೆಸರು ಹಾಗೂ ದರದೊಂದಿಗೆ ಪ್ರದರ್ಶನ ಆಗುತ್ತವೆ. ಗ್ರಾಹಕರು ತಮಗೆ ಬೇಕಾದ ಹಣ್ಣಿನ ಮೇಲೆ ಕ್ಲಿಕ್ ಮಾಡಿ, ಆನ್ಲೈನ್ನಲ್ಲೇ ಹಣ ಪಾವತಿಸಬೇಕು(ಅಂಚೆ ಶುಲ್ಕವೂ ಸೇರಿ). ಬುಕ್ ಆದ ಕೂಡಲೇ ಇಮೇಲ್ ಮತ್ತು ಮೊಬೈಲ್ ಮೂಲಕ ಅಂಚೆ ಇಲಾಖೆಗೆ ಹಾಗೂ ರೈತರಿಗೆ ಸಂದೇಶ ರವಾನೆಯಾಗುತ್ತದೆ ಎಂದು ಮಾವು ಮಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಳ್ಳಾರಿ ಭಾಗದ ರೈತರು ದಾಳಿಂಬೆ, ಸೀಬೆ, ಅಂಜೂರ ಹಣ್ಣುಗಳನ್ನು ಹಾಗೂ ಕೋಲಾರ ಮತ್ತಿತರ ಭಾಗದ ರೈತರು ತಾವು ಬೆಳೆದ ಬೋರೆಹಣ್ಣನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಅಚ್ಚುಕಟ್ಟಾಗಿ ಬಾಕ್ಸ್ ಮಾಡಿ ರವಾನೆ ಮಾಡಲಿದ್ದಾರೆ. ಈ ಬಾಕ್ಸ್ಗಳನ್ನು ಗ್ರಾಹಕರ ಮನೆ ಬಾಗಿಲಿಗೆ ಅಂಚೆ ಇಲಾಖೆಯ ಸಿಬ್ಬಂದಿ (ಪೋಸ್ಟ್ ಮ್ಯಾನ್) ತಲುಪಿಸಲಿದ್ದಾರೆ ಎಂದು ಮಾವು ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸಿ.ಜೆ.ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.