ಕಡಲ ನಗರಿಯಲ್ಲೊಬ್ಬ ರಾಜಕುಮಾರ; ವೃದ್ಧರ ಬಾಳಿಗೆ ಬೆಳಕಾದ ರೋಹಿತ್
ನನ್ನ ತಾಯಿಗೆ ಆರೋಗ್ಯ ಸರಿ ಇರಲಿಲ್ಲ. ತಂದೆಗೂ ವಯಸ್ಸಾದ್ದರಿಂದ ಒಬ್ಬರೇ ತಾಯಿಯನ್ನು ನೋಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ನಾನು ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬರುವ ಹೊತ್ತಿಗೆ ಅವರು ಮಕ್ಕಳು ತಾಯಿಯನ್ನು ಕಾಯುತ್ತಿದ್ದಂತೆ ನನ್ನ ಬರುವಿಕೆಗಾಗಿ ಕಾಯುತ್ತಿದ್ದರು. ನಾನು ಮನೆಗೆ ಹೋದ ಬಳಿಕ ಖುಷಿಯಾಗುತ್ತಿದ್ದರು. ಇದನ್ನು ನೋಡಿದ್ದೇ ಇರುವಷ್ಟು ದಿನ ನಾನು ನನ್ನ ತಂದೆ ತಾಯಿಗಳ ಜೊತೆಗೆ ದಿನ ಪೂರ್ತಿ ಕಳೆಯಬೇಕು ಎಂದು ನಿರ್ಧಾರ ಮಾಡಿದೆ. ಈ ನಿರ್ಧಾರವೇ ಮುಂದೆ ‘ಪಶ್ಚಿಮ ಪುನರ್ವಸತಿ ಕೇಂದ್ರ’ ಪ್ರಾರಂಭಿಸಲು ಕಾರಣವಾಯಿತು’ ಎಂದು ಹೇಳುವ ಮಂಗಳೂರಿನ ರೋಹಿತ್ ಸ್ಯಾಂಕ್ಟಸ್ ಇಂದು ತೊಂಬತ್ಮೂರು ವೃದ್ಧರ ಪಾಲಿಗೆ ಆಸರೆಯಾಗಿದ್ದಾರೆ.
ಬೆಂಗಳೂರು (ಮಾ. 06): ನನ್ನ ತಾಯಿಗೆ ಆರೋಗ್ಯ ಸರಿ ಇರಲಿಲ್ಲ. ತಂದೆಗೂ ವಯಸ್ಸಾದ್ದರಿಂದ ಒಬ್ಬರೇ ತಾಯಿಯನ್ನು ನೋಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ನಾನು ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬರುವ ಹೊತ್ತಿಗೆ ಅವರು ಮಕ್ಕಳು ತಾಯಿಯನ್ನು ಕಾಯುತ್ತಿದ್ದಂತೆ ನನ್ನ ಬರುವಿಕೆಗಾಗಿ ಕಾಯುತ್ತಿದ್ದರು. ನಾನು ಮನೆಗೆ ಹೋದ ಬಳಿಕ ಖುಷಿಯಾಗುತ್ತಿದ್ದರು. ಇದನ್ನು ನೋಡಿದ್ದೇ ಇರುವಷ್ಟು ದಿನ ನಾನು ನನ್ನ ತಂದೆ ತಾಯಿಗಳ ಜೊತೆಗೆ ದಿನ ಪೂರ್ತಿ ಕಳೆಯಬೇಕು ಎಂದು ನಿರ್ಧಾರ ಮಾಡಿದೆ. ಈ ನಿರ್ಧಾರವೇ ಮುಂದೆ ‘ಪಶ್ಚಿಮ ಪುನರ್ವಸತಿ ಕೇಂದ್ರ’ ಪ್ರಾರಂಭಿಸಲು ಕಾರಣವಾಯಿತು’ ಎಂದು ಹೇಳುವ ಮಂಗಳೂರಿನ ರೋಹಿತ್ ಸ್ಯಾಂಕ್ಟಸ್ ಇಂದು ತೊಂಬತ್ಮೂರು ವೃದ್ಧರ ಪಾಲಿಗೆ ಆಸರೆಯಾಗಿದ್ದಾರೆ.
ವೃತ್ತಿಯಲ್ಲಿ ಕೌನ್ಸಿಲರ್ ಆಗಿರುವ ರೋಹಿತ್ ತಮ್ಮ ಹೆಂಡತಿ ಸುನೀತಾ ಮಾಂತೇರೋ ಸಹಕಾರದಿಂದ 2010 ರಲ್ಲಿ ಮಂಗಳೂರು ಉಳ್ಳಾಲ ಸಮೀಪದ ಸೋಮೇಶ್ವರದಲ್ಲಿ ‘ಪಶ್ಚಿಮ ಪುನರ್ವಸತಿ ಕೇಂದ್ರ’ ತೆರೆದಿದ್ದಾರೆ. ಪಶ್ಚಿಮ ಎಂದರೆ
ಸೂರ್ಯ ಮುಳುಗುವ ದಿಕ್ಕು. ಸೂರ್ಯ ಮುಳುಗುವುದು ಸಂಧ್ಯಾಕಾಲದ ಸೂಚಕ. ಅದಕ್ಕಾಗಿಯೇ ‘ಪಶ್ಚಿಮ ಪುನರ್ವಸತಿ ಕೇಂದ್ರ’ ಎನ್ನುವ ವೃದ್ಧಾಶ್ರಮ ಸ್ಥಾಪಿಸಿ ವೃದ್ಧರ ಬಾಳಿಗೆ ಬೆಳಕಾಗಿದ್ದಾರೆ.
ಉಳ್ಳವರ ದುಡ್ಡಲ್ಲಿ ಇಲ್ಲದವರಿಗೂ ಸೇವೆ:
ನಾನಾ ಕಾರಣಗಳಿಂದ ತಂದೆ ತಾಯಿಯನ್ನು ನೋಡಿಕೊಳ್ಳಲು ಆಗದೇ ಇರುವವರು ಇಲ್ಲಿಗೆ ಕರೆತಂದು ಬಿಡುತ್ತಾರೆ. ಅವರ ಬಳಿ ಸಂಸ್ಥೆಯ ಬಗ್ಗೆ ಹೇಳಿ ನಿರ್ವಹಣ ವೆಚ್ಚ ತೆಗೆದುಕೊಳ್ಳುತ್ತಾರೆ. ಇದರಿಂದಲೇ ಬಡವರು, ಅನಾಥ ವೃದ್ಧರಿಗೆ ಉಚಿತವಾಗಿ ಆಶ್ರಯ ನೀಡುವ ಕೆಲಸವೂ ಇಲ್ಲಿ ನಡೆಯುತ್ತಿದೆ. ತೊಂಬತ್ಮೂರು ಜನರಿರುವ ಇಲ್ಲಿ ಹತ್ತು ಜನ ಸೇವಕರಿದ್ದಾರೆ. ಅವರೆಲ್ಲರ ನಿರ್ವಹಣೆ ರೋಹಿತ್ ಅವರದ್ದೇ. ವೈದ್ಯಕೀಯ ಸೇವೆ, ಆಪ್ತ ಸಮಾಲೋಚನೆ, ಮನೋರಂಜನಾ ಚಟುವಟಿಕೆಗಳು, ಮದ್ಯ ಹಾಗೂ ಮಾದಕ ವ್ಯಸನಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಮುಂತಾದ ಚಟುವಟಿಕೆಗಳು ಇಲ್ಲಿ ನಿಯಮಿತವಾಗಿ ನಡೆದುಕೊಂಡು ಬರುತ್ತಿವೆ. ಇಲ್ಲಿಗೆ ಬಂದ ಕೆಲವು ವೃದ್ಧರು ಸುಮ್ಮನೆ ಕೂರದೇ ತಮ್ಮ ಕೈಲಾದ ಕೆಲಸಗಳು, ತೀರಾ ಅಸಹಾಯಕರಿಗೆ ಸಹಾಯ ಮಾಡುತ್ತಾ ಬಂದಿರುವುದರಿಂದ ಎಲ್ಲರೂ ಒಂದು ಕುಟುಂಬದಂತೆ ಒಟ್ಟಾಗಿ ಜೀವನ ನಡೆಸಲು ಸಾಧ್ಯವಾಗಿದೆ.
‘ನನಗೆ ಇಂದಿಗೂ ಬಹಳಷ್ಟು ಕಡೆಗಳಿಂದ ಕರೆ ಮಾಡಿ ವಯಸ್ಸಾದವರಿಗೆ ಆಶ್ರಯ ನೀಡಿ ಎಂದು ಹೇಳುತ್ತಾರೆ. ನಾನು ನನ್ನ ಶಕ್ತಿ ಮೀರಿ ಸೇವೆ ಮಾಡುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಸುತ್ತ ಮುತ್ತಲ ಪ್ರದೇಶದಲ್ಲಿ
ಯಾವ ವೃದ್ಧರೂ ಕೂಡ ಅನಾಥರಂತೆ ಬದುಕಬಾರದು. ಅವರಿಗೆ ಸೂಕ್ತ ಚಿಕಿತ್ಸೆ, ಆಶ್ರಯ ನೀಡುವ ಕಾರ್ಯವನ್ನು ನನ್ನ ಜೀವನದ ಗುರಿಯಾಗಿಟ್ಟುಕೊಂಡು ಮಾಡುತ್ತೇನೆ. ನನ್ನ ತಾಯಿಗಾಗಿ ಪ್ರಾರಂಭವಾದ ಈ ಸೇವೆ ಇಂದು ನನ್ನ ಹೆಂಡತಿ
ಸುನೀತಾ ಮಾಂತೇರೋ ಸಹಕಾರದಿಂದ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ. ಬಾಳಿನ ಸಂಧ್ಯಾ ಕಾಲದಲ್ಲಿರುವ ಜೀವಗಳಿಗೆ ಆಶ್ರಯ ನೀಡಿದ ಸಮಾಧಾನ ನನಗಿದೆ’ ಎನ್ನುವ ರೋಹಿತ್ ಮುಂದೆ ತಮ್ಮ ಸೇವಾ ವಲಯವನ್ನು ವಿಸ್ತರಿಸುವ ಹಂಬಲದಲ್ಲಿದ್ದಾರೆ.
‘ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕೈಗೊಂಡ ಸೇವಾ ಕಾರ್ಯ ಹೇಗಿದ್ದರೂ ಮುಂದೆ ಸಾಗುತ್ತಿದೆ. ಇದನ್ನೇ ದೊಡ್ಡ ಮಟ್ಟದಲ್ಲಿ ಮಾಡಿ ಆಶ್ರಯ ಅರಸಿ ಬಂದವರೆಲ್ಲರಿಗೂ ಕೈಲಾದ ಸಹಾಯ ಮಾಡಬೇಕು ಎಂದುಕೊಳ್ಳುತ್ತೇನೆ. ಆದರೆ ನನ್ನ ಮನೆಯಲ್ಲಿ ಹೆಚ್ಚು ಸ್ಥಳಾವಕಾಶವಿಲ್ಲದ ಕಾರಣ ಸಾಧ್ಯವಾದಷ್ಟು ಸೇವೆ ಮಾಡುತ್ತಿದ್ದೇನೆ. ಆದರೆ ಮುಂದೆ ಕನಿಷ್ಟ ಮುನ್ನೂರು ಜನಕ್ಕೆ ಅನುಕೂಲವಾಗುವ ರೀತಿಯಲ್ಲಿ ಆಶ್ರಯ ನೀಡಬೇಕು ಎನ್ನುವ ಗುರಿ ಹೊಂದಿದ್ದೇನೆ. ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಲಿದೆ ಎಂದು ಹೇಳುವ ರೋಹಿತ್ ದಂಪತಿಗಳ ನಿಸ್ವಾರ್ಥ ಕಾರ್ಯಕ್ಕೆ ನಿಮ್ಮ ಕಡೆಯಿಂದ ಒಂದು ಧನ್ಯವಾದವಿರಲಿ. ದೂ. 9945990755