ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಮೂರು ಹೆಸರುಗಳು ಮಂಚೂಣಿಯಲ್ಲಿವೆ. ಕರ್ನಾಟಕ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. 

ನವದೆಹಲಿ[ಜೂ.30] : ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ಹಿನ್ನೆಲೆ ಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನ ತ್ಯಜಿಸಲು ನಿರ್ಧರಿಸಿರುವ ರಾಹುಲ್ ಗಾಂಧಿ ಅವರನ್ನು ಮನವೊಲಿಸುವ ಕಾಂಗ್ರೆಸ್ ನಾಯಕರ ಪ್ರಯತ್ನ ಫಲ ನೀಡದ ಹಿನ್ನೆಲೆಯಲ್ಲಿ ಉತ್ತರಾಧಿಕಾರಿ ಶೋಧಿಸುವ ನಿಟ್ಟಿನಲ್ಲಿ ಕಸರತ್ತು ತೀವ್ರಗೊಂಡಿದೆ. 

Add Asianetnews Kannada as a Preferred SourcegooglePreferred

ರಾಹುಲ್ ಸ್ಥಾನಕ್ಕೆ ಯಾರನ್ನು ತರಬಹುದು ಎಂಬ ಬಗ್ಗೆ ಕಾಂಗ್ರೆಸ್ ಪಕ್ಷದೊಳಗೆ ಚರ್ಚೆಗಳು ಬಿರುಸಾಗಿದ್ದು, ಹಿರಿಯ ಕಾಂಗ್ರೆಸ್ಸಿಗ ಎಂ. ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುಂಚೂಣಿಯಲ್ಲಿದೆ. ಕೆಲವು ವಾರಗಳ ಹಿಂದೆಯೇ ಖರ್ಗೆ ಹೆಸರು ಪ್ರಸ್ತಾಪವಾಗಿತ್ತು. ಸ್ವತಃ ಖರ್ಗೆ ಅದನ್ನು ನಿರಾಕರಿಸಿದ್ದರು. ನಂತರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೆಸರು ಚರ್ಚೆಗೆ ಬಂದಿತ್ತು. ಕೆಲದಿನಗಳ ಬಳಿಕ ಕೇರಳದ ಹಿರಿಯ ಕಾಂಗ್ರೆಸ್ಸಿಗ ಎ.ಕೆ. ಆ್ಯಂಟನಿ ಅವರು ಹುದ್ದೆ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂಬ ವರದಿಗಳು ಬಂದಿದ್ದವು. ಇದೀಗ ಮಾಧ್ಯಮವೊಂದರ ಪ್ರಕಾರ, ಕಾಂಗ್ರೆಸ್ ನಾಯಕರ ಕಣ್ಣ ಮುಂದೆ ಮೂರು ಹೆಸರುಗಳು ಇವೆ.

 ಅವೆಂದರೆ-ಮಲ್ಲಿಕಾರ್ಜುನ ಖರ್ಗೆ, ಅಶೋಕ್ ಗೆಹ್ಲೋಟ್, ಮುಕುಲ್ ವಾಸ್ನಿಕ್. ಮಲ್ಲಿಕಾರ್ಜುನ ಖರ್ಗೆ ಅವರು 2014 ರಿಂದ 2019ರವರೆಗೆ ಲೋಕಸಭೆ ಯಲ್ಲಿನ ಕಾಂಗ್ರೆಸ್ ನಾಯಕರಾಗಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಉಳಿದಂತೆ ಮುಕುಲ್ ವಾಸ್ನಿಕ್ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ತೋರಿದ ಕೇರಳ ಹಾಗೂ ತಮಿಳುನಾಡಿನ ಉಸ್ತುವಾರಿ. ಅಶೋಕ್ ಗೆಹ್ಲೋಟ್ ಅವರು ಹಾಲಿ ರಾಜಸ್ಥಾನ ಮುಖ್ಯಮಂತ್ರಿ ಯಾಗಿದ್ದಾರೆ. ಈ ಮೂವರ ಪೈಕಿ ಪಕ್ಷ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ರಾಹುಲ್ ಅನುಪಸ್ಥಿತಿಯಲ್ಲಿ ನೇಮಕಾತಿಗಳನ್ನು ‘ಎಐಸಿಸಿ’ ಹೆಸರಿನಲ್ಲಿ ನಡೆಸುತ್ತಿದ್ದ ಪಕ್ಷ ಈಗ ‘ಕಾಂಗ್ರೆಸ್ ಅಧ್ಯಕ್ಷರು’ ಎಂಬ ಹೆಸರಿನಡಿ ಛತ್ತೀಸ್‌ಗಢ ಘಟಕಕ್ಕೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದೆ.