ತ್ರಿಭಾಷಾ ಸೂತ್ರ ಒಪ್ಪುವ ಟ್ವೀಟ್‌ ಮಾಡಿ ತ.ನಾಡು ಸಿಎಂ ಎಡವಟ್ಟು| ದೇಶಾದ್ಯಂತ ತಮಿಳು 3ನೇ ಭಾಷೆ ಮಾಡಿ ಎಂದ ಪಳನಿಸ್ವಾಮಿ| ವಿರೋಧ ಬರುತ್ತಿದ್ದಂತೆ ಕೆಲವೇ ತಾಸಿನಲ್ಲಿ ಟ್ವೀಟ್‌ ಡಿಲೀಟ್‌

ಚೆನ್ನೈ[ಮೇ.07]: ತ್ರಿಭಾಷಾ ಸೂತ್ರದಡಿ ಹಿಂದಿ ಹೇರಿಕೆ ಯತ್ನ ನಡೆಯುತ್ತಿದೆ ಎಂಬ ವಿವಾದ ತಣ್ಣಗಾದ ಬೆನ್ನಲ್ಲೇ, ಹಿಂದಿಯನ್ನು ದೇಶಾದ್ಯಂತ ತೃತೀಯ ಭಾಷೆಯಾಗಿ ಸೇರ್ಪಡೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್‌ ಮಾಡುವ ಮೂಲಕ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಭಾರಿ ವಿವಾದಕ್ಕೆ ಸಿಲುಕಿದ್ದಾರೆ.

Add Asianetnews Kannada as a Preferred SourcegooglePreferred

ತ್ರಿಭಾಷಾ ಸೂತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದ್ದರೂ ಮುಖ್ಯಮಂತ್ರಿಗಳು ತ್ರಿಭಾಷಾ ಸೂತ್ರದ ಪರವೇ ಒಲವು ತೋರಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಇದು ತೀವ್ರಗೊಳ್ಳುತ್ತಿದ್ದಂತೆ, ಪಳನಿಸ್ವಾಮಿ ಅವರು ತಮ್ಮ ವಿವಾದಿತ ಟ್ವೀಟ್‌ ಅನ್ನೇ ಡಿಲೀಟ್‌ ಮಾಡಿ ಪಾರಾಗಲು ಯತ್ನಿಸಿದ್ದಾರೆ.

ದೇಶದ ಬೇರೆ ರಾಜ್ಯಗಳಲ್ಲಿ ತಮಿಳನ್ನು ಮೂರನೇ ಭಾಷೆಯಾಗಿ ಕಲಿಯುವ ಅವಕಾಶ ನೀಡಬೇಕು ಎಂದು ಪಳನಿಸ್ವಾಮಿ ಬುಧವಾರ ಬೆಳಗ್ಗೆ ಮೋದಿ ಅವರಿಗೆ ಟ್ವೀಟ್‌ ಮಾಡಿದರು. ಆದರೆ ತಮಿಳುನಾಡಿನಲ್ಲಿ ಸದ್ಯ ಇಲ್ಲದ ತ್ರಿಭಾಷೆಯನ್ನು ಜಾರಿಗೆ ತರಲು ಪಳನಿಸ್ವಾಮಿ ಹೊರಟಿದ್ದಾರೆ ಎಂಬ ಆಕ್ರೋಶ ಭುಗಿಲೆದ್ದಿತು. ನಾಲ್ಕೇ ತಾಸಿನಲ್ಲಿ ಆ ಟ್ವೀಟ್‌ ಅನ್ನು ಮುಖ್ಯಮಂತ್ರಿ ಡಿಲೀಟ್‌ ಮಾಡಿದರು.

ಈ ನಡುವೆ, ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳಲ್ಲಿ ತಮಿಳನ್ನು ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌ ಆಗ್ರಹಿಸಿದ್ದಾರೆ.