ಇಂದಿನಿಂದ ಮಹದಾಯಿ ಅಂತಿಮ ಹಂತದ ವಿಚಾರಣೆ
ರಾಜಕೀಯ ಕೆಸರೆರಚಾಟದ ಮಧ್ಯೆ ಇಂದಿನಿಂದ ಮಹದಾಯಿ ನದಿ ನೀರು ಹಂಚಿಕೆಯ ಅಂತಿಮ ವಿಚಾರಣೆ ಆರಂಭವಾಗಲಿದೆ. ಈ ವೇಳೆ ಕರ್ನಾಟಕ ತನ್ನ ಅಂತಿಮ ವಾದ ಮಂಡಿಸಲಿದೆ.
ಬೆಂಗಳೂರು (ಫೆ.06): ರಾಜಕೀಯ ಕೆಸರೆರಚಾಟದ ಮಧ್ಯೆ ಇಂದಿನಿಂದ ಮಹದಾಯಿ ನದಿ ನೀರು ಹಂಚಿಕೆಯ ಅಂತಿಮ ವಿಚಾರಣೆ ಆರಂಭವಾಗಲಿದೆ. ಈ ವೇಳೆ ಕರ್ನಾಟಕ ತನ್ನ ಅಂತಿಮ ವಾದ ಮಂಡಿಸಲಿದೆ.
ಗೋವಾ ಸಲ್ಲಿಸಿರುವ ನ್ಯಾಯಾಂಗ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯದ ಪರವಾದ ಹಿರಿಯ ವಕೀಲ ಫಾಲಿ ನಾರಿಮನ್ ಮಂಡಿಸಬೇಕಾಗಿತ್ತು. ಅವರ ಅನಾರೋಗ್ಯದ ಕಾರಣ ಅವರ ಬದಲಿಗೆ ಅಶೋಕ್ ದೇಸಾಯಿ ಹಾಗೂ ಇಂದಿರಾ ಜೈಸಿಂಗ ಅವರು ವಾದ ಮಂಡಿಸಲಿದ್ದಾರೆ.ಅಂತಿಮ ಹಂತದ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಆಗಸ್ಟ್ ಒಳಗಾಗಿ ತೀರ್ಪು ಪ್ರಕಟಿಸಲಾಗುವುದು.
ಇಂದಿನಿಂದ ಅಂತಿಮಹಂತದ ವಿಚಾರಣೆ
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ನಡುವಿನ ಮಹದಾಯಿ ನೀರಿನ ಹಂಚಿಕೆ ಕುರಿತ ಪ್ರಕರಣದ ಅಂತಿಮ ಹಂತದ ವಿಚಾರಣೆ ನ್ಯಾಯಮಂಡಳಿಯಲ್ಲಿ ಇಂದಿನಿಂದ ಆರಂಭವಾಗಲಿದೆ. ಜಲವಿವಾದಗಳಿಗೆ ಸಂಬಂಧಿಸಿದಂತೆ ರಾಜ್ಯದ ಪರ ವಾದ ಮಂಡಿಸಿರುವ ಹಿರಿಯ ವಕೀಲ ಫಾಲಿ ನಾರಿಮನ್ ಅವರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದರಿಂದ ಅವರ ಬದಲಿಗೆ ಅಶೋಕ್ ದೇಸಾಯಿ ಹಾಗೂ ಇಂದಿರಾ ಜೈಸಿಂಗ್ ಅವರು ಅಂತಿಮ ಹಂತದ ವಿಚಾರಣೆಯ ವೇಳೆ ವಾದ ಮಂಡಿಸಲಿದ್ದಾರೆ. ನ್ಯಾಯಮೂರ್ತಿ ಜೆ.ಎಸ್. ಪಾಂಚಾಲ್ ನೇತೃತ್ವದ ಪೀಠವು ಈಗಾಗಲೇ ಮೂರು ರಾಜ್ಯಗಳ ಸಾಕ್ಷ್ಯಗಳ ಪಾಟೀ ಸವಾಲು ಆಲಿಸಿದ್ದು, ಅಂತಿಮ ಹಂತದ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಆಗಸ್ಟ್ ಒಳಗಾಗಿ ಐತೀರ್ಪು ಪ್ರಕಟಿಸಲಿದೆ. ಇನ್ನೂ ಪ್ರಕರಣದ ವಿಚಾರಣೆ ನಡೆದಿರುವಾಗಲೇ ಕರ್ನಾಟಕ ಸರ್ಕಾರ ಕಳಸಾ ನಾಲೆಯ ತಿರುವು ಯೋಜನೆಯನ್ನು ಅಕ್ರಮವಾಗಿ ಆರಂಭಿಸಿದೆ.. ಈ ಮೂಲಕ ನ್ಯಾಯಮಂಡಳಿಯ ಈ ಹಿಂದಿನ ಆದೇಶಗಳನ್ನು ಉಲ್ಲಂಘಿಸಿದೆ ಎಂದು ಕಳೆದ ತಿಂಗಳು ಗೋವಾ ಸರ್ಕಾರ ರಾಜ್ಯದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಿನ್ನೆಯಷ್ಟೇ ನ್ಯಾಯಮಂಡಳಿಗೆ ಉತ್ತರ ನೀಡಿದೆ.