ಮಂಡ್ಯ, ಮೈಸೂರಿಗೂ ಕಾದಿದೆಯಾ ಜಲಪ್ರಳಯದ ಗಂಡಾಂತರ?
ಕೆಆರ್ ಎಸ್, ಬೆಳಗೊಳ ಸೇರಿ ಸುತ್ತಮುತ್ತಲ ಭಾಗಗಳಲ್ಲಿ ಮಧ್ಯಾಹ್ನ 2.40 ರ ಸಮಯದಲ್ಲಿ ಎರಡು ಬಾರಿ ಭಾರೀ ಶಬ್ದ ಕೇಳಿಬಂದಿದೆ. ಕೆಲವರಿಗೆ ಮನೆಗಳಲ್ಲಿ ನಡುಗಿದಂತಹ ಅನುಭವವಾಗಿದ್ದು, ಅವರು ಮನೆ ಯಿಂದ ಹೊರಗೋಡಿ ಬಂದಿದ್ದಾರೆ.
ಮಂಡ್ಯ : ಕೇರಳ, ಕೊಡಗು ಹಾಗೂ ಬೆಂಗಳೂರಿನಲ್ಲಿ ಭಯಾನಕ ಶಬ್ದ ಕೇಳಿಬಂದ ಬೆನ್ನಲ್ಲೇ ಮಂಗಳವಾರ ಮಂಡ್ಯ, ಮೈಸೂರಿನಲ್ಲಿ ಭಾರೀ ಶಬ್ಧ ಕೇಳಿಬಂದಿದೆ. ಕೆಆರ್ ಎಸ್, ಬೆಳಗೊಳ ಸೇರಿ ಸುತ್ತಮುತ್ತಲ ಭಾಗಗಳಲ್ಲಿ ಮಧ್ಯಾಹ್ನ 2.40 ರ ಸಮಯದಲ್ಲಿ ಎರಡು ಬಾರಿ ಭಾರೀ ಶಬ್ದ ಕೇಳಿಬಂದಿದೆ. ಕೆಲವರಿಗೆ ಮನೆಗಳಲ್ಲಿ ನಡುಗಿದಂತಹ ಅನುಭವವಾಗಿದ್ದು, ಅವರು ಮನೆ ಯಿಂದ ಹೊರಗೋಡಿ ಬಂದಿದ್ದಾರೆ. ಈ ಶಬ್ದ ಪ್ರಕೃತಿ ವಿಕೋಪದ ಮುನ್ಸೂಚನೆಯೇ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.
ಕೊಡಗು, ಕೇರಳ, ಬೆಂಗಳೂರಿನಲ್ಲಿ ಈ ಹಿಂದೆ ಭಾರೀ ಶಬ್ದ ಕೇಳಿಬಂದಿತ್ತು. ಇದಾದ ಸ್ವಲ್ಪ ದಿನಗಳಲ್ಲಿ ಭಾರಿ ಮಳೆ ಸುರಿದು ಜನರಿಗೆ ಸಂಕಷ್ಟ ಎದುರಾಗಿತ್ತು. ಇದೀಗ ಮಂಡ್ಯದಲ್ಲಿ ಶಬ್ಧ ಕೇಳಿರುವುದು ಆತಂಕಕ್ಕೆ ಕಾರಣವಾಗಿದೆ. 1 ತಿಂಗಳ ಹಿಂದೆ ಬೆಂಗಳೂರಿನ ರಾಜರಾಜೇಶ್ವರಿ ನಗರ ಭಾಗದಲ್ಲಿ ಭಾರಿ ಶಬ್ದ ಕೇಳಿ ಭೂಮಿ ನಡುಗಿದ ಅನುಭವವಾಗಿತ್ತು. ಈಗ ಭಾನು ವಾರರಾತ್ರಿ ರಾಜರಾಜೇಶ್ವರಿನಗರದಲ್ಲಿ 15ಸೆಂ.ಮೀ. ಮಳೆಯಾಗಿ ಜನರನ್ನು ಕಂಗಾಲು ಮಾಡಿತ್ತು.
ಇದೇ ರೀತಿ ಕೊಡಗಿನಲ್ಲೂ ಆಗಿತ್ತು. ಮಹಾಮಳೆಗೆ ಮೊದಲು ಕೊಡಗಿನಲ್ಲಿ ಭಾರೀ ಶಬ್ಧ, ಭೂಕಂಪನ ಆಗಿತ್ತು. ಕಾಕತಾಳೀಯ ಎಂಬಂತೆ ಶಬ್ಧ ಕೇಳಿಬಂದ ಕೆಲ ದಿನಗಳಲ್ಲೇ ಭೀಕರ ಜಲಪ್ರಳಯ ಸಂಭವಿಸಿತ್ತು. ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ ಭಯಂಕರ ಶಬ್ದ ಕೇಳಿ ಬಂದಿದ್ದು, ಜಲ ದಿಗ್ಬಂಧನ ಉಂಟಾಗಿದೆ. ಪ್ರಸಕ್ತದಲ್ಲಿ ಹಿಮಾಚಲ ಪ್ರದೇಶದಲ್ಲಿ ವರುಣ ಅಬ್ಬರಿಸುತ್ತಿದ್ದು, ನೋಡ ನೋಡುತ್ತಿದ್ದಂತೆ ಕಣ್ಣೆದುರಿಗೆ ಬೆಟ್ಟಗುಡ್ಡಗಳು, ಮನೆಗಳು ಕುಸಿದು ಬೀಳುತ್ತಿವೆ. ಇಲ್ಲಿಯ ರಾವಿ ನದಿ ತುಂಬಿ ಹರಿಯುತ್ತಿದೆ. ನದಿ ಪ್ರವಾಹಕ್ಕೆ ಬಸ್ಸು, ಲಾರಿಗಳು ಕೊಚ್ಚಿ ಹೋಗಿವೆ. ಈ ಎಲ್ಲಾ ಘಟನೆಗಳನ್ನು ಹೋಲಿಸಿದಾಗ ಶಬ್ದಕ್ಕೂ ಮಹಾ ಮಳೆಗೂ ನಂಟಿರುವುದು ವೇದ್ಯವಾಗುತ್ತದೆ.