ಕಾರ್ಗಿಲ್ ಹುತಾತ್ಮ ತಂದೆಯ ಬೆಟಾಲಿಯನ್ಗೆ ಪುತ್ರನೂ ಸೇರ್ಪಡೆ
ಹಿತೇಶ್ ಕುಮಾರ್ ತಮ್ಮ ತಂದೆ ಸಾಯುವಾಗ ಕೇವಲ 6 ವರ್ಷದವರು. ರಜಪೂತ್ ರೈಫಲ್ಸ್ ಪಡೆಯ 2ನೇ ಬೆಟಾಲಿಯನ್ ನಲ್ಲಿ ತಂದೆ ಬಚ್ಚನ್ ಸಿಂಗ್ ಲ್ಯಾನ್ಸ್ ನಾಯ್ಕ್ ಆಗಿದ್ದರು. 1999ರ ಜೂನ್ 12 ರಂದು ಕಾರ್ಗಿಲ್ ಯುದ್ಧದಲ್ಲಿ ತಂದೆ ಮೃತಪಟ್ಟರು. ತಮ್ಮ ತಂದೆ ಸೇವೆ ಸಲ್ಲಿಸಿದ ಪಡೆಗೆ ಪುತ್ರನೂ ಸೇರಿ ಸೇವೆ ಸಲ್ಲಿಸಲು ಸಜ್ಜಾಗಿದ್ದು, ಈ ಮೂಲಕ ಕನಸು ನನಸಾಗಿಸುತ್ತಿದ್ದಾರೆ.
ಮುಜಾಫರ್ ನಗರ್ : ಹಿತೇಶ್ ಕುಮಾರ್ ತಮ್ಮ ತಂದೆ ಸಾಯುವಾಗ ಕೇವಲ 6 ವರ್ಷದವರು. ರಜಪೂತ್ ರೈಫಲ್ಸ್ ಪಡೆಯ 2ನೇ ಬೆಟಾಲಿಯನ್ ನಲ್ಲಿ ತಂದೆ ಬಚ್ಚನ್ ಸಿಂಗ್ ಲ್ಯಾನ್ಸ್ ನಾಯ್ಕ್ ಆಗಿದ್ದರು. 1999ರ ಜೂನ್ 12 ರಂದು ಕಾರ್ಗಿಲ್ ಯುದ್ಧ ನಡೆಯುತ್ತಿದ್ದ ವೇಳೆ ತಂದೆ ಮೃತಪಟ್ಟರು.
ಈ ಘಟನೆಯಾಗಿ 19 ವರ್ಷಗಳ ಬಳಿಕ ಪುತ್ರ ಹಿತೇಶ್ ಡೆಹ್ರಾಡೂನ್ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಪಾಸ್ ಔಟ್ ಆಗಿ ಭಾರತೀಯ ಸೇನೆಗೆ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸಲು ಸಜ್ಜಾಗಿದ್ದಾರೆ.
ಇಲ್ಲಿ ಕೇವಲ ಇಷ್ಟೇ ಅಲ್ಲ. ಇದರಲ್ಲಿ ವಿಶೇಷತೆ ಎಂದರೆ ತಂದೆ ಸೇವೆ ಸಲ್ಲಿಸಿದ್ದ ಬೆಟಾಲಿಯನ್ ಗೆ ಮಗನೂ ಕೂಡ ಸೇವೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ.
ಮುಜಾಫರ್ ನಗರದಲ್ಲಿರುವ ಸಿವಿಲ್ ಲೈನ್ ಪ್ರದೇಶದಲ್ಲಿ ಹಿತೇಶ್ ತಮ್ಮ ಹುತಾತ್ಮ ತಂದೆ ಬಚ್ಚನ್ ಸಿಂಗ್ ಅವರಿಗೆ ಗೌರವ ಸಲ್ಲಿಸಿ, ತಮ್ಮ ಕನಸು ನನಸಾಗಿರುವುದಕ್ಕೆ ಅತ್ಯಂತ ಹರ್ಷಗೊಂಡಿದ್ದಾಗಿ ಹೇಳಿದ್ದಾರೆ.
ಅಲ್ಲದೇ ತಮ್ಮ ತಂದೆಯ ಕನಸೂ ಕೂಡ ನನಸಾಗಿದ್ದು, ದೇಶಕ್ಕೆ ಅತ್ಯಂತ ಪ್ರಮಾಣಿಕವಾಗಿ ತಮ್ಮ ಸೇವೆ ಸಲ್ಲಿಸುವುದಾಗಿ ಮನದುಂಬಿ ಮಾತನಾಡಿದ್ದಾರೆ.