'ಬಿಜೆಪಿಯವರದ್ದು ಕಪಟ ಗೋಪ್ರೇಮ'
ಬಿಜೆಪಿಯವರದ್ದು ಕಪಟ ಗೋಪ್ರೇಮವಾಗಿದ್ದು, ಬಿಜೆಪಿಯವರಿಗೆ ಗೋವಿನ ಬಗ್ಗೆ ಅಷ್ಟು ಪ್ರೀತಿ ಇದ್ದರೆ ಕೇಂದ್ರ ಸರ್ಕಾರ ವಿದೇಶಗಳಿಗೆ ಗೋಮಾಂಸ ಸಾಗಾಣಿಕೆ ಮಾಡುತ್ತಿರುವುದನ್ನು ತಡೆಗಟ್ಟುವಂತೆ ಪ್ರತಿಭಟನೆ ನಡೆಸಲಿ.
ಸಾಗರ: ಬಿಜೆಪಿಯವರದ್ದು ಕಪಟ ಗೋಪ್ರೇಮವಾಗಿದ್ದು, ಬಿಜೆಪಿಯವರಿಗೆ ಗೋವಿನ ಬಗ್ಗೆ ಅಷ್ಟು ಪ್ರೀತಿ ಇದ್ದರೆ ಕೇಂದ್ರ ಸರ್ಕಾರ ವಿದೇಶಗಳಿಗೆ ಗೋಮಾಂಸ ಸಾಗಾಣಿಕೆ ಮಾಡುತ್ತಿರುವುದನ್ನು ತಡೆಗಟ್ಟುವಂತೆ ಪ್ರತಿಭಟನೆ ನಡೆಸಲಿ.
ಏಕೆಂದರೆ ಗೋಮಾಂಸ ವಿದೇಶಕ್ಕೆ ರಫ್ತು ಮಾಡುವಲ್ಲಿ ಹೆಚ್ಚಿನವರು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಆಪ್ತರಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ರಾಜ್ಯದಲ್ಲಿ ಅಧಿಕಾರ ಹಿಡಿಯಲು ಕೋಮುಭಾವನೆಯನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಸೌಹಾರ್ದತೆಯನ್ನು ಹಾಳು ಮಾಡಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುವ ಬಿಜೆಪಿ ಕನಸು ನನಸಾಗುವುದಿಲ್ಲ ಎಂದು ಹೇಳಿದರು.
ಜಿಲ್ಲೆಯ ಶಿರಾಳಕೊಪ್ಪ ಮತ್ತು ಹೊಸನಗರದಲ್ಲಿ ಸ್ವಯಂಘೋಷಿತ ಗೋರಕ್ಷಕರ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಕದಡುವ ಪ್ರಯತ್ನ ನಡೆಸಲಾಗುತ್ತಿದೆ. ಈಗಾಗಲೇ ಪೊಲೀಸರ ಮಧ್ಯಪ್ರವೇಶದಿಂದ ವಾತಾವರಣ ತಿಳಿಯಾಗಿದೆ. ಪ್ರಧಾನಿ ಮೋದಿಯವರು ನಕಲಿ ಗೋರಕ್ಷಕರನ್ನು ಬಂಧಿಸುವಂತೆ ಕರೆ ನೀಡಿದ್ದಾರೆ.
ಜಿಲ್ಲೆಯ ಪೊಲೀಸರು ಶಿರಾಳಕೊಪ್ಪ ಹಾಗೂ ಹೊಸನಗರದಲ್ಲಿ ಗೋರಕ್ಷಣೆ ಹೆಸರಿನಲ್ಲಿ ಗೊಂದಲ ಸೃಷ್ಟಿಸಿ, ಅಶಾಂತಿ ಉಂಟು ಮಾಡುತ್ತಿರುವವರನ್ನು ತಕ್ಷಣ ಬಂಧಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕಾಗೋಡು ತಿಮ್ಮಪ್ಪನವರು ಹಿರಿಯ ರಾಜಕಾರಣಿಯಾಗಿದ್ದು, ಬಿಜೆಪಿಯಿಂದ ಬುದ್ಧಿ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಸ್ಥಳೀಯ ಹವ್ಯಕ ಮಂಡಲ ಕಾಗೋಡು ತಿಮ್ಮಪ್ಪನವರ ಹೇಳಿಕೆಯನ್ನು ಸರಿಯಾಗಿ ಅರ್ಥ ಮಾಡಿ ಕೊಳ್ಳದೆ ಅನಗತ್ಯ ಹೇಳಿಕೆ ನೀಡುತ್ತಿದೆ. ಕಾಗೋಡು ತಿಮ್ಮಪ್ಪನವರು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಅವರ ಜನಪ್ರಿಯತೆ ಯನ್ನು ಸಹಿಸಿಕೊಳ್ಳಲಾಗದೆ ಬಿಜೆಪಿ ಷಡ್ಯಂತ್ರ ಮಾಡುತ್ತಿದೆ ಎಂದು ದೂರಿದರು.
ಬಿಜೆಪಿ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಕಾಂಗ್ರೆಸ್ ನಾಯಕರು ಹಾಗೂ ಪಕ್ಷದ ಬಗ್ಗೆ ಇಲ್ಲ ಸಲ್ಲದ ಅಪ್ರಚಾರ ಮಾಡುತ್ತಿದೆ. ಯಾವ ಗ್ರೂಪ್ನಿಂದ ಇಂತಹ ಅಪಪ್ರಚಾರ ನಡೆಯುತ್ತಿದೆ ಅಂತಹವರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಲಾಗುತ್ತದೆ. ಜೊತೆಗೆ ಕಾಂಗ್ರೆಸ್ ಪಕ್ಷ ಬೂತ್ಮಟ್ಟದಿಂದ ಸಾಮಾಜಿಕ ಜಾಲತಾಣಗಳ ಮೂಲಕ ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಜನರ ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ ಎಂದು ತಿಳಿಸಿದರು.