ಪರಿಷ್ಕೃತ ವೇತನ ಬಿಡುಗಡೆವರೆಗೂ ಮೌಲ್ಯಮಾಪನವಿಲ್ಲ: ಪ್ರಾಧ್ಯಾಪಕರ ಧರಣಿ
2006 ರ ನಂತರ ನೇಮಕವಾದ ಪ್ರಾಧ್ಯಾಪಕರಿಗೆ ಯುಜಿಸಿ ಬಾಕಿ ವೇತನ ನೀಡುವುದು ಹಾಗೂ 6 ನೇ ವೇತನ ಆಯೋಗದ ಪರಿಷ್ಕೃತ ವೇತನ ಬಿಡುಗಡೆ ಮಾಡುವವರೆಗೂ ಮೌಲ್ಯ ಮಾಪನ ಬಹಿಷ್ಕರಿಸಿ ಅನಿರ್ದಿಷ್ಟ ಕಾಲದ ಧರಣಿ ನಡೆಸಲು ಬೆಂಗಳೂರು ವಿಶ್ವವಿದ್ಯಾ ಲಯ ಪ್ರಾಧ್ಯಾಪಕರ ಸಂಘ ನಿರ್ಧರಿಸಿದೆ.
ಬೆಂಗಳೂರು (ಡಿ.27): 2006 ರ ನಂತರ ನೇಮಕವಾದ ಪ್ರಾಧ್ಯಾಪಕರಿಗೆ ಯುಜಿಸಿ ಬಾಕಿ ವೇತನ ನೀಡುವುದು ಹಾಗೂ 6 ನೇ ವೇತನ ಆಯೋಗದ ಪರಿಷ್ಕೃತ ವೇತನ ಬಿಡುಗಡೆ ಮಾಡುವವರೆಗೂ ಮೌಲ್ಯ ಮಾಪನ ಬಹಿಷ್ಕರಿಸಿ ಅನಿರ್ದಿಷ್ಟ ಕಾಲದ ಧರಣಿ ನಡೆಸಲು ಬೆಂಗಳೂರು ವಿಶ್ವವಿದ್ಯಾ ಲಯ ಪ್ರಾಧ್ಯಾಪಕರ ಸಂಘ ನಿರ್ಧರಿಸಿದೆ.
ಸೆಂಟ್ರಲ್ ಕಾಲೇಜು ಆವರಣದಲ್ಲಿ ಪ್ರತಿಭಟನೆಗೆ ಚಾಲನೆ ನೀಡಲಾಗಿದೆ. ಸರ್ಕಾರ ಸ್ಪಂದಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ ಎಂಬ ದೃಢ ನಿರ್ಧಾರ ತಿಳಿಸಿದೆ. ಪ್ರಾಧ್ಯಾಪಕರ ಸಂಘಕ್ಕೆ ಶಿಕ್ಷಣ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ರಮೇಶ್'ಬಾಬು, ಬಸವರಾಜ ಹೊರಟ್ಟಿ, ಮರಿತಿಬ್ಬೇಗೌಡ, ಪುಟ್ಟಣ್ಣ, ಶರಣಪ್ಪ ಮಟ್ಟೂರು ಸೇರಿದಂತೆ ಹಲವು ಪರಿಷತ್ ಸದಸ್ಯರು ಸಾಥ್ ನೀಡಿದ್ದಾರೆ. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪರಿಷತ್ ಸದಸ್ಯ ರಮೇಶ್'ಬಾಬು, ಯುಜಿಸಿ ಬಾಕಿ ವೇತನ ಬಿಡುಗಡೆ, ನಾಲ್ಕು ತಿಂಗಳ ಬಿ.ಇಡಿ ಪ್ರಾಧ್ಯಾಪಕ ವೇತನ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳಿಗೆ ಸರ್ಕಾರ ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಒಂದು ವೇಳೆ ಪ್ರತಿಭಟನಾ ನಿರತ ಪ್ರಾಧ್ಯಾಪಕರ ಮೇಲೆ ಎಸ್ಮಾ ಜಾರಿಯಂತಹ ಬೆದರಿಕೆ ತಂತ್ರಗಳನ್ನು ಅನುಸರಿಸಿದರೆ ಶಿಕ್ಷಣ ಸಚಿವರ ಮನೆಗೆ ಬೀಗ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರ ಹುದ್ದೆ ಭರ್ತಿ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವರು ಹೇಳಿಕೆ ನೀಡಿ ಹಲವು ತಿಂಗಳು ಕಳೆದರೂ ನೇಮಕ ಪ್ರಕ್ರಿಯೆಗೆ ಮಾತ್ರ ಚಾಲನೆ ನೀಡಿಲ್ಲ. 15-20 ವರ್ಷ ಕಾರ್ಯನಿರ್ವಹಿಸಿರುವ ಪ್ರಾಧ್ಯಾಪಕರಿಗೆ ಪ್ರಾಂಶುಪಾಲರ ಹುದ್ದೆಗೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.