‘ಪಕ್ಷದ ನಾಯಕರು ಮಾತು ಕಡಿಮೆ ಮಾಡಿದರೇ ಎಲ್ಲವೂ ಸರಿಯಾಗುತ್ತೆ’
- ಸಿದ್ದರಾಮಯ್ಯ ಕೊಟ್ಟಷ್ಟು ಭಾಗ್ಯಗಳನ್ನು ಮತ್ಯಾರು ಕೊಡಲಿಲ್ಲ. ಅದರೂ ನಮ್ಮ ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಲಾಗಲಿಲ್ಲ
- ಕಾಂಗ್ರೆಸ್ - ಜೆಡಿಎಸ್ ಪ್ರಣಾಳಿಕೆಗಳ ಸಮಾನ ಅಂಶಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿಟ್ಟು ಈ ಸರ್ಕಾರ ಅನುಷ್ಠಾನಗೊಳಿಸಲಿದೆ
ಶಿವಮೊಗ್ಗ: ಸಿದ್ದರಾಮಯ್ಯ ಕೊಟ್ಟಷ್ಟು ಭಾಗ್ಯಗಳನ್ನು ಮತ್ಯಾರು ಕೊಡಲಿಲ್ಲ. ಅದರೂ ನಮ್ಮ ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಲಾಗಲಿಲ್ಲ. ಕರಾವಳಿ , ಮಲೆನಾಡು ಭಾಗದಲ್ಲಿ ಕಾಂಗ್ರೆಸ್ ಶಾಸಕರು ಅಯ್ಕೆಯಾಗುವುದೇ ಕಷ್ಟವಾಯ್ತು. ಕಾರಣವೇನು?. ರಾಜ್ಯದಲ್ಲಿ ಅಭಿವೃದ್ಧಿ ಮಾಡಿದರೂ ಯಶಸ್ಸು ಕಾಣಲಿಲ್ಲ. ನನ್ನಲ್ಲೇ ನಾನು ಪ್ರಶ್ನೆ ಕೇಳಿಕೊಂಡರು ಉತ್ತರ ಸಿಗುತ್ತಿಲ್ಲವೆಂದು ಕಂದಾಯ ಸಚಿವ ಅರ್.ವಿ.ದೇಶಪಾಂಡೆ ಹೇಳಿದ್ದಾರೆ.
ಶಿವಮೊಗ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ದೇಶಪಾಂಡೆ, ಮುಂಬರುವ ಮಹಾನಗರ ಪಾಲಿಕೆ, ಸಹಕಾರಿ ಸಂಘಗಳ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಲು ಕರೆ ನೀಡಿದರು.
ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಮ್ಮಿಶ್ರ ಸರ್ಕಾರ 5 ವರ್ಷ ಅಧಿಕಾರದಲ್ಲಿ ಇರಬೇಕೆಂಬುದು ಎಲ್ಲರ ಅಭಿಲಾಷೆ. ಪಕ್ಷದ ನಾಯಕರು ಮಾತು ಕಡಿಮೆ ಮಾಡಿದರೇ ಎಲ್ಲವೂ ಸರಿಯಾಗುತ್ತೆ. ಪ್ರತಿಯೊಬ್ಬರು ಮಾತನಾಡಿದರೇ ಗೊಂದಲ ಮೂಡುತ್ತದೆ. ಜವಾಬ್ದಾರಿ ಇರುವವರು ಮಾತನಾಡಿದರೇ ಎಲ್ಲವೂ ಸರಿ ಹೋಗುತ್ತದೆ, ಎಂದು ಅವರು ಹೇಳಿದರು.
ಕಾಂಗ್ರೆಸ್ - ಜೆಡಿಎಸ್ ಪ್ರಣಾಳಿಕೆಗಳ ಸಮಾನ ಅಂಶಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿಟ್ಟು ಈ ಸರ್ಕಾರ ಅನುಷ್ಠಾನಗೊಳಿಸಲಿದೆ. ರಾಜ್ಯದಲ್ಲಿ ಮಳೆಹಾನಿಯಿಂದಾದ ನಷ್ಟಕ್ಕೆ ಪರಿಹಾರ ನೀಡಲು ಎಲ್ಲಾ ಜಿಲ್ಲೆಗಳಿಗೂ 5 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಮನೆ ಹಾನಿ ಸೇರಿದಂತೆ ಪ್ರತಿಯೊಂದಕ್ಕೂ ಹಳೆಯ ಮಾನದಂಡಗಳನ್ನು ಬಿಟ್ಟು ಹೊಸ ನಿಯಮಗಳ ಪ್ರಕಾರ ಗರಿಷ್ಠ ಪರಿಹಾರ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.