ಜಲಪಾತ ಬಳಿ ಕುಸಿದ ಗುಡ್ಡ : ರೈಲು ಸಂಚಾರ ಸ್ಥಗಿತ
ರಾಜ್ಯದಲ್ಲಿ ಮಳೆಯ ಅಬ್ಬರ ಮತ್ತೆ ಮುಂದುವರಿದಿದೆ. ಭಾರೀ ಮಳೆಯಿಂದ ದೂಧಸಾಗರ ಜಲಪಾತದ ಬಳಿಯಲ್ಲಿ ಭೂಮಿ ಕುಸಿದಿದ್ದು ರೈಲ್ವೆ ಸಂಚಾರವನ್ನು ಸ್ಥಗಿತ ಮಾಡಲಾಗಿದೆ.
ಬೆಳಗಾವಿ: ಬೆಳಗಾವಿ ಮತ್ತು ಖಾನಾಪುರ ಅರಣ್ಯ ಪ್ರದೇಶಗಳಲ್ಲಿ ಮಳೆ ಅಬ್ಬರ ಮಂಗಳವಾರವೂ ಮುಂದುವರಿದಿದೆ. ಗೋವಾ ರಾಜ್ಯ ವ್ಯಾಪ್ತಿಯ ದೂಧಸಾಗರ ಜಲಪಾತದ ಬಳಿ ಮಂಗಳವಾರ ಗುಡ್ಡ ಕುಸಿದಿದ್ದು, ನಿಜಾಮುದ್ದೀನ್- ವಾಸ್ಕೋ ರೈಲು ಸಂಚಾರ ರದ್ದುಗೊಂಡಿದೆ.
ಲೋಂಡಾ-ಬೆಳಗಾವಿ- ಮಿರಜ್ ರೈಲು ಹಳಿ ಮಾರ್ಗ 37/800ರಿಂದ 900 ಮೀಟರ್ ವ್ಯಾಪ್ತಿಯಲ್ಲಿ ಗುಡ್ಡ ಕುಸಿದಿದೆ. ಹೀಗಾಗಿ ನಿಜಾಮುದ್ದೀನ್ ಲಿಂಕ್ ಎಕ್ಸ್ಪ್ರೆಸ್ ಮತ್ತು ವಿಎಸ್ಜಿ- ಎಸ್ಬಿಸಿ ಎಕ್ಸ್ಪ್ರೆಸ್ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸುರಿಯುತ್ತಿರುವ ಮಳೆಯ ನಡುವೆಯೇ ಮಣ್ಣು ಮತ್ತು ಕಲ್ಲುಗಳನ್ನು ತೆರವುಗೊಳಿಸುವ ಕಾರ್ಯ ನಡೆದಿದೆ. ಗೋವಾದಿಂದ ರೈಲು ಪ್ರಯಾಣಿಕರು ಬಸ್ಗಳ ಮೂಲಕ ಬೆಳಗಾವಿಗೆ ಆಗಮಿಸುತ್ತಿದ್ದಾರೆ.