ಸೋತ ಲಕ್ಷ್ಮಣ್ ಸವದಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಇದರಿಂದ ಅನೇಕ ನಾಯಕರು ಅಸಮಾಧಾನಗೊಂಡಿದ್ದು ಇದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಸಿತುಪ್ಪವಾಗುವ ಸಾಧ್ಯತೆ ಇದೆ. 

ಬೆಂಗಳೂರು [ಆ.27]:  ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನವಲ್ಲದೆ ಉಪಮುಖ್ಯಮಂತ್ರಿ ಸ್ಥಾನವನ್ನೂ ನೀಡಿರುವುದರಿಂದ ಉದ್ಭವಿಸಬಹುದಾದ ಬೆಳವಣಿಗೆ ಗಳನ್ನು ಎದುರಿಸುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಸಿತುಪ್ಪವಾಗಿ ಪರಿಣಮಿಸಬಹುದು. 

Add Asianetnews Kannada as a Preferred SourcegooglePreferred

ಯಡಿಯೂರಪ್ಪ ಅವರ ಲಿಂಗಾಯತ ಸಮುದಾಯದಿಂದ ಮತ್ತೊಬ್ಬ ನಾಯಕನನ್ನು ಬೆಳೆಸಬೇಕು ಎಂಬ ಉದ್ದೇಶದಿಂದಲೇ ಪಕ್ಷದ ಹೈಕಮಾಂಡ್ ಮತ್ತು ಸಂಘ ಪರಿವಾರ ಲಕ್ಷ್ಮಣ ಸವದಿ ಅವರಿಗೆ ಪ್ರಮುಖ ಸ್ಥಾನಮಾನ ನೀಡಿದೆ. ಆದರೆ, ಸೋಲು ಅನುಭವಿಸಿದವರಿಗೆ ಈ ಪರಿಯ ಪ್ರಾಮುಖ್ಯತೆ ಯಾಕೆ ಎಂದು ಅನೇಕ ಶಾಸಕರು ಆಕ್ರೋಶಗೊಂಡಿರುವುದರಿಂದ ಅವರನ್ನು ಸಮಾಧಾನಪಡಿಸುವುದು ಯಡಿಯೂರಪ್ಪ ಅವರಿಗೆ ಸವಾಲೇ ಸರಿ. 

ಈ ಕಾರಣಕ್ಕಾಗಿಯೇ ಸೋಮವಾರ ಕೊನೆಯ ಗಳಿಗೆವರೆಗೂ ಯಡಿಯೂರಪ್ಪ ಅವರು ಸವದಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡದಂತೆ ವರಿಷ್ಠರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಇದಕ್ಕಾಗಿ ಸಂಘ ಪರಿವಾರದ ಮುಖಂಡರನ್ನು ಭೇಟಿ ಮಾಡಿ ಅವರ ಮೂಲಕ ವರಿಷ್ಠರಿಗೆ ತಲುಪಿಸಲು ಯತ್ನಿಸಿದರು. ಆದರೆ, ಯಾವುದೂ ಫಲ ನೀಡಲಿಲ್ಲ. 

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೊನೆಗೆ ತಮ್ಮ ಗೃಹ ಕಚೇರಿಗೆ ಸವದಿ ಅವರನ್ನು ಕರೆಸಿಕೊಂಡ ಯಡಿಯೂರಪ್ಪ ಮತ್ತು ಹಿರಿಯ ಸಚಿವ ಗೋವಿಂದ ಕಾರಜೋಳ ಅವರು ಉಪಮುಖ್ಯಮಂತ್ರಿ ಸ್ಥಾನ ಒಪ್ಪಿಕೊಳ್ಳದಂತೆ ತರಹೇವಾರಿ ಮನವೊಲಿಕೆ ಪ್ರಯತ್ನ ನಡೆಸಿದರು. ಆದರೆ, ಇದರಲ್ಲಿ ತಮ್ಮ ಪಾತ್ರವೇನೂ ಇಲ್ಲ. ಹೈಕಮಾಂಡ್ ಮತ್ತು ಸಂಘ ಪರಿವಾರದ ನಿರ್ಧಾರ ಇದಾಗಿದೆ. ಹೈಕಮಾಂಡ್ ಯಾವ ನಿರ್ಧಾರ ಕೈಗೊಂಡರೂ ಸಂತೋಷ. ನಾನಾಗಿಯೇ ಯಾವುದೇ ಸ್ಥಾನಮಾನ ಕೇಳಿಲ್ಲ ಎಂದು ಸಮಜಾಯಿಷಿ ನೀಡಿದರು. ಹೀಗಾಗಿ, ಅಂತಿಮವಾಗಿ ಸಂಜೆ ರಾಜಭವನದಿಂದ ಪಟ್ಟಿ ಪ್ರಕಟಗೊಂಡಿತು.