ಪರಿಷತ್ತಿನಲ್ಲೂ ಡೈರಿ ಕೋಲಾಹಲ: ಸಿಬಿಐ ತನಿಖೆಗೆ ಈಶ್ವರಪ್ಪ ಒತ್ತಾಯ
ಡೈರಿ ಚರ್ಚೆಗೆ ಆಗ್ರಹಿಸಿದ ಈಶ್ವರಪ್ಪ | ಅದನ್ನು ವಿರೋಧಿಸಿದ ಮುಖ್ಯಮಂತ್ರಿ | ಈಶ್ವರಪ್ಪ ಹಾಗೂ ಸಿಎಂ ನಡುವೆ ಮಾತಿನ ಚಕಮಕಿ
ಬೆಂಗಳೂರು (ಮಾ.16): ವಿಧಾನ ಪರಿಷತ್ತಿನಲ್ಲೂ ಇಂದು ಕಾಂಗ್ರೆಸ್ ಡೈರಿ ವಿಷಯ ಪ್ರತಿಧ್ವನಿಸಿ ಕೋಲಾಹಲ ಎಬ್ಬಿಸಿತು.
ವಿಷಯ ಪ್ರಸ್ತಾಪಿಸಿದ ಪರಿಷತ್ತು ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ, ಕಾಂಗ್ರೆಸ್ ಡೈರಿ ಕುರಿತು ಚರ್ಚಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಎರಡೆರಡು ಬಾರಿ ಅವಕಾಶ ನೀಡಲು ನಿಯಮಾವಳಿಯಲ್ಲಿ ಅವಕಾಶವಿಲ್ಲ. ಹೀಗಾಗಿ ಕೊಡಬೇಡಿ ಎಂದು ಸಭಾಪತಿಗೆ ಆಗ್ರಹಿಸಿದರು.
ಈ ವೇಳೆ ಈಶ್ವರಪ್ಪ ಹಾಗೂ ಸಿಎಂ ನಡುವೆ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್ ಡೈರಿ ಹಾಗೂ ಲೇಹರ್ ಸಿಂಗ್'ಗೆ ಸೇರಿದೆ ಎನ್ನಲಾದ ಡೈರಿಗಳನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಈಶ್ವರಪ್ಪ ಒತ್ತಾಯಿಸಿದರು.
ಇದಕ್ಕೆ ಕೆಂಡಮಂಡಲರಾದ ಸಿಎಂ, ನಿಮಗೆ ಯಾವಾಗ ಸಿಬಿಐ ವ್ಯಾಮೋಹ ಬಂತು ಎಂದು ಕುಹಕವಾಡಿದರು.