ಪ್ರೊ. KS ಭಗವಾನ್ ಗೃಹ ಬಂಧನ
ಶ್ರೀ ರಾಮನ ಬಗ್ಗೆ ವಿವಾದಿತ ಹೇಳಿಕೆ ನೀಡಿರುವ ಸಂಬಂಧ ಫ್ರೊ ಕೆ.ಎಸ್ ಭಗವಾನ್ ಅವರಿಗೆ ಯಾವುದೇ ಹೇಳಿಕೆ ನೀಡದಂತೆ ಸೂಚಿಸಿದ್ದು, ಗೃಹ ಬಂಧನ ವಿಧಿಸಲಾಗಿದೆ.
ಮೈಸೂರು: ‘ರಾಮ ಮಂದಿರ ಏಕೆ ಬೇಡ?’ ಕೃತಿಯ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾರಿಗುವ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅವರಿಗೆ ಸದ್ಯಕ್ಕೆ ಯಾವುದೇ ಹೇಳಿಕೆ ನೀಡದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಅಲ್ಲದೇ ಪೊಲೀಸ್ ಭದ್ರತೆಯಲ್ಲಿ ಗೃಹ ಬಂಧನ ವಿಧಿಸಲಾಗಿದೆ.
ಪೊಲೀಸರ ಅನುಮತಿಯಿಲ್ಲದೆ ಹೊರ ಹೋಗುವಂತಿಲ್ಲ ಎಂದಿದ್ದಾರೆ. ಅಲ್ಲದೇ ಸದ್ಯ ಯಾವುದೇ ಹೇಳಿಕೆಗಳನ್ನು ನೀಡದಂತೆ ತಾಕೀತು ಮಾಡಿದ್ದಾರೆ.
ರಾಮನ ಕುರಿತು ಅವಹೇಳನಕಾರಿಯಾದ ಅಂಶ ಭಗವಾನ್ ಅವರ ಪುಸ್ತಕದಲ್ಲಿದ್ದು, ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂಬ ಕಾರಣಕ್ಕೆ ಅನೇಕರು ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಭಗವಾನ್ ಅವರ ವಿರುದ್ಧ ದೂರು ನೀಡಿದ್ದರು.
ಮಾಧ್ಯಮಗಳ ಮುಂದಾಗಲಿ ಅಥವಾ ಹೊರಗೆಲ್ಲಿಯಾದರೂ ವಿವಾದಾತ್ಮಕ ಹೇಳಿಕೆ ನೀಡದಂತೆ ಮೌಖಿಕವಾಗಿ ಸೂಚನೆ ನೀಡಲಾಗಿದೆ. ನಗರ ಪೊಲೀಸ್ ಆಯುಕ್ತರು ತಮ್ಮ ಅಧೀನ ಅಧಿಕಾರಿಗಳ ಮೂಲಕ ಈ ಸೂಚನೆ ನೀಡಿರುವುದಾಗಿ ಪ್ರೊ.ಕೆ.ಎಸ್.ಭಗವಾನ್ ತಿಳಿಸಿದರು. ಅಂತೆಯೇ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರೆದಿದ್ದು, ನನ್ನ ವಿರುದ್ಧ ದಾಖಲಾದ ಪ್ರಕರಣ ನನ್ನ ಗಮನಕ್ಕೆ ಈವರೆಗೂ ಬಂದಿಲ್ಲ ಎಂದರು. ಭಗವಾನ್ ಅವರ ನಿವಾಸಕ್ಕೆ ಹೊಸ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಬಂದೋಬಸ್ತ್ ಹೆಚ್ಚಿಸಲಾಗಿದೆ.