ಇವಿಎಂ ಬಗ್ಗೆ ಭವಿಷ್ಯ ನುಡಿದಿದ್ದಾರೆ ಕೋಡಿ ಶ್ರೀಗಳು
ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೆ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರು (ಜ.07): ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೆ ಭವಿಷ್ಯ ನುಡಿದಿದ್ದಾರೆ.
ನಾನು ಒಂದು ವರ್ಷದಿಂದ ನುಡಿದ ಭವಿಷ್ಯವಾಣಿ ಸತ್ಯವಾಗಿದೆ. ನಾನು ಇದನ್ನ ಇಲ್ಲಿವರೆಗೂ ಅರ್ಥ ಹೇಳಿರಲಿಲ್ಲ. ನಾನು ನುಡಿದ ಭವಿಷ್ಯ ಕರ್ನಾಟಕ ರಾಜಕೀಯದ ಮೇಲೂ ಪ್ರಭಾವ ಬೀರಲಿದೆ ಎಂದಿದ್ದಾರೆ.
ಮತ ಯಂತ್ರದಲ್ಲಿ ಯಾರಿಗೋ ಓಟು ಹಾಕಿದ್ರೆ ಇನ್ಯಾರಿಗೋ ಹೋಗುತ್ತದೆ. ಈ ಹಿನ್ನೆಲೆಯಲ್ಲೇ ಬಿತ್ತಿದ ಬೆಳಸು ಪರರು ಕುಯ್ದಾರು. ಬಿತ್ತಿದ ಬೀಜ ಒಂದು, ಫಸಲು ಇನ್ನೊಂದು ಅಂತ ಕಾಲಜ್ಞಾನ ನುಡಿದಿದ್ದೆ. ಗುಜರಾತ್ ,ಯುಪಿಯಲ್ಲೂ ಅದೇ ಆಯ್ತು, ಇಲ್ಲೂ ಕೂಡ ಅದೇ ಆಗುತ್ತೆ. ಸರ್ಕಾರ ಈಗಲೇ ಎಚ್ಚೆತ್ತುಗೊಳ್ಳಬೇಕು. ಜನರ ಮನಸ್ಸಿನಲ್ಲಿರುವ ಸಂಶಯವನ್ನ ಆಳುವವರು ನೀಗಿಸಬೇಕು. ಮತಯಂತ್ರವನ್ನು ಪರಿಶೀಲನೆಗೆ ಒಳಪಡಿಸಿದರೆ ನಿಜವಾದ ಪ್ರಜಾಪ್ರಭುತ್ವ ಸಿಗುತ್ತದೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಕುಂಭ ರಾಶಿಗೆ ಗುರು ಬಂದರೆ ಉತ್ತಮ ಮಳೆ ಬರುತ್ತದೆ. ಕೆರೆ ಕಟ್ಟೆ ತುಂಬುತ್ತವೆ. ಧನುಸ್ಸು ರಾಶಿಗೆ ಗುರು ಬಂದರೆ ಜಗ ತಳಮಳಗೊಳ್ಳುವುದು. ಗಡಿಯಲ್ಲಿ ಯುದ್ಧದ ಭಯದ ವಾತಾವರಣ ಉಂಟಾಗುವುದು. ಸುಖ ದುಃಖ ಸಮನಾಗಿ ತೂಗ್ಯಾವು ಎಂದು ಚೆನ್ನರಾಯಪಟ್ಟಣ ಕತ್ತರಿಘಟ್ಟದ ಮೆಳಿಯಮ್ಮ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.