ರಾಜ್ಯ ಮೈತ್ರಿ ಕೂಟ 13 ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದು, ಈ ಸಾಲಿಗೆ ಇದೀಗ ಶಾಸಕಿಯೋರ್ವರು ಸೇರ್ಪಡೆಯಾಗಲಿದ್ದಾರೆ ಎನ್ನುವ ವದಂತಿ ಹಬ್ಬಿದೆ. 

ಖಾನಾಪುರ [ಜು.08]: ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭೆ ಕ್ಷೇತ್ರದ ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರೂ ಸೋಮವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳು ತಾಲೂಕಿನ ಶಾಸಕರ ಆಪ್ತ ವಲಯದಲ್ಲಿ ದಟ್ಟವಾಗಿ ಹರಡಿದೆ. ಭಾನುವಾರ ಖಾನಾಪುರ ತಾಲೂಕಿನ ಕೆಲ ಕಾಂಗ್ರೆಸ್ ಮುಖಂಡರು ಪಟ್ಟಣದಲ್ಲಿ ಸಭೆಯನ್ನು ನಡೆಸಿ ಶಾಸಕರ ನಡೆಯ ಬಗ್ಗೆ ಚರ್ಚಿಸಿದ್ದಾರೆ. 

Add Asianetnews Kannada as a Preferred SourcegooglePreferred

ಮತ್ತೊಂದು ಬೆಳವಣಿಗೆಯಲ್ಲಿ ಪಟ್ಟಣದ ತಮ್ಮ ನಿವಾಸದಲ್ಲಿ ಸೋಮವಾರ ಮುಂಜಾನೆ ಕರೆದಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ಶಾಸಕರು ಮುಂದೂಡಿದ್ದಾರೆ. 

ಸೋಮವಾರ ಮತ್ತು ಮಂಗಳವಾರ ಕ್ಷೇತ್ರಾದ್ಯಂತ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳನ್ನು ಶಾಸಕರು ಅನಿರ್ದಿಷ್ಟ ಅವಧಿಗೆ ಮುಂದೂಡಲು ತಮ್ಮ ಆಪ್ತ ವಲಯದವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯುವ ಪ್ರಯತ್ನವಾಗಿ ಶಾಸಕರ ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಶಾಸಕಿ ಭಾನುವಾರವೂ ನಿಗೂಢ ನಡೆಯನ್ನು ಮುಂದುವರಿಸಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.