ಜೆಡಿಎಸ್ ರಾಜ್ಯಾಧ್ಯಕ್ಷ ಸಚಿವರಾಗಿ ನೇಮಕವಾದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ನೇಮಕ ಶೀಘ್ರದಲ್ಲೇ ಆಗುವ ಸಾಧ್ಯತೆ ಇದೆ. 

ಬೆಂಗಳೂರು : ನೆರೆ ರಾಜ್ಯ ಕೇರಳದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವ ಕುರಿತು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಸಭೆ ನಡೆಸಿದ್ದು, ಶೀಘ್ರದಲ್ಲಿಯೇ ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ. ಜೆಡಿಎಸ್‌ನ ಕೇರಳ ರಾಜ್ಯದ ಅಧ್ಯಕ್ಷ ಕೃಷ್ಣನ್‌ ಕುಟ್ಟಿಅವರು ಕಮ್ಯೂನಿಸ್ಟ್‌ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. 

Add Asianetnews Kannada as a Preferred SourcegooglePreferred

ಎರಡು ಹುದ್ದೆಗಳನ್ನು ನಿಭಾಯಿಸಲು ಕಷ್ಟವಾಗುತ್ತಿರುವ ಕಾರಣ ರಾಜ್ಯಾಧ್ಯಕ್ಷರನ್ನು ಬದಲಿಸುವಂತೆ ಕೇರಳ ಜೆಡಿಎಸ್‌ನ ಮುಖಂಡರು ಮನವಿ ಮಾಡಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಶೀಘ್ರದಲ್ಲಿಯೇ ನೇಮಕ ಮಾಡುವ ಬಗ್ಗೆ ದೇವೇಗೌಡ ಅವರು ಭರವಸೆ ನೀಡಿದ್ದಾರೆ.

ಶನಿವಾರ ಕೇರಳದ ಜೆಡಿಎಸ್‌ ಮುಖಂಡರಾದ ಕೃಷ್ಣನ್‌ ಕುಟ್ಟಿ, ಮ್ಯಾಥ್ಯೂ ಟಿ.ಥಾಮಸ್‌, ಮುರುಗದಾಸ್‌ ಸೇರಿದಂತೆ ಇತರರು ಆಗಮಿಸಿ ದೇವೇಗೌಡರ ಬಳಿ ಸಮಾಲೋಚಿಸಿದರು. 2021ಕ್ಕೆ ಕೇರಳದಲ್ಲಿ ಚುನಾವಣೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಪಕ್ಷವನ್ನು ಸಂಘಟನೆಗೊಳಿಸಬೇಕಿದೆ.

ಹೀಗಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷರನ್ನು ಬದಲಿಸುವಂತೆ ಮನವಿ ಮಾಡಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕೇರಳ ರಾಜ್ಯದ ಜೆಡಿಎಸ್‌ ನಾಯಕರೊಂದಿಗೆ ಮಾತುಕತೆ ನಡೆಸಿದರು. ಪ್ರಮುಖ ಪದಾಧಿಕಾರಿಗಳ ಬದಲಾವಣೆ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎನ್ನಲಾಗಿದೆ.