‘ದುರ್ಗಾ ವೈನ್ ಶಾಪ್ ಅಥವಾ ಬಾರ್ ಎಂದು ಹೆಸರಿಟ್ಟರೆ ‘ಸೆಕ್ಸಿ ದುರ್ಗಾ ವಿರೋಧಿ’ಗಳಿಗೆ ಯಾವುದೇ ತಕರಾರಿಲ್ಲ. ನನಗೆ ಬೆದರಿಕೆ ಹಾಕುವವರನ್ನು ನೋಡಿ ನಗು ಬರುತ್ತದೆ. ನನ್ನಿಂದ ಅವರು ಏನು ಪಡೆದುಕೊಳ್ಳಲು ಸಾಧ್ಯ?’ ಎಂದರು.
ತಿರುವನಂತಪುರ(ಡಿ.11): ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರಗಳ ವಿರುದ್ಧ ಅಪಸ್ವರ ಎತ್ತಿ ವಿವಾದಕ್ಕೆ ಗುರಿಯಾಗಿದ್ದ ನಟ ಪ್ರಕಾಶ್ ರೈ, ‘ಕೇರಳದಲ್ಲಿ ಮಾತ್ರ ಭಯವಿಲ್ಲದೇ ಉಸಿರಾಡಬಹುದಾದ ವಾತಾವರಣವಿದೆ’ ಎಂದಿದ್ದಾರೆ.
ಕೇರಳ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಾನು ಕೇರಳಕ್ಕೆ ಬಂದಾಗ ಯಾವುದೇ ಸಂಭಾಷಣೆಗಳನ್ನು ನನ್ನ ಜತೆ ತೆಗೆದುಕೊಂಡು ಬರುವುದಿಲ್ಲ. ಕೇರಳದಲ್ಲಿ ಭಯವಿಲ್ಲದೇ ಉಸಿರಾಡಬಹುದು. ಹೀಗಾಗಿ ನಾನು ಈ ರಾಜ್ಯ ಪ್ರೀತಿಸುವೆ’ ಎಂದರು. ‘ಸೆಕ್ಸಿ ದುರ್ಗಾ’ ಎಂಬ ಹೆಸರಿನ ಸಿನಿಮಾ ಬಗ್ಗೆ ಸಮೂಹವೊಂದು ವಿರೋಧ ಮಾಡಿದ್ದನ್ನು ಕೂಡ ಅವರು ಖಂಡಿಸಿದರು.
‘ದುರ್ಗಾ ವೈನ್ ಶಾಪ್ ಅಥವಾ ಬಾರ್ ಎಂದು ಹೆಸರಿಟ್ಟರೆ ‘ಸೆಕ್ಸಿ ದುರ್ಗಾ ವಿರೋಧಿ’ಗಳಿಗೆ ಯಾವುದೇ ತಕರಾರಿಲ್ಲ. ನನಗೆ ಬೆದರಿಕೆ ಹಾಕುವವರನ್ನು ನೋಡಿ ನಗು ಬರುತ್ತದೆ. ನನ್ನಿಂದ ಅವರು ಏನು ಪಡೆದುಕೊಳ್ಳಲು ಸಾಧ್ಯ?’ ಎಂದರು.
‘ಒಬ್ಬ ಕಲಾವಿದನಾಗಿ ದನಿ ಎತ್ತಬೇಕು ಎಂಬುದು ನನ್ನ ಭಾವನೆ. ಅದು ನನ್ನ ಜವಾಬ್ದಾರಿ. ಅವರು ದನಿಯನ್ನು ಅಡಗಿಸಲು ಯತ್ನಿಸುತ್ತಿದ್ದಾರೆ. ಜನರ ಮನಸ್ಸಿನಲ್ಲಿ ಭಯ ಹುಟ್ಟಿಸಿ ಚಕಾರ ಕೂಡ ಎತ್ತಲು ಹೆದರುವಂಥ ವಾತಾವರಣ ನಿರ್ಮಿಸುತ್ತಿದ್ದಾರೆ. ರಾಜಸ್ಥಾನದಲ್ಲಿ ಒಬ್ಬನನ್ನು ಹೊಡೆದು ಸಾಯಿಸಲಾಗುತ್ತಿದೆ. ಹಂತಕ ಆರಾಮವಾಗಿ ಓಡಾಡಿಕೊಂಡಿದ್ದಾನೆ ಎಂದು ರೈ ಕಿಡಿಕಾರಿದರು.
