‘ಐಎಸ್ಐ 70 ವರ್ಷದಲ್ಲಿ ಮಾಡದ್ದನ್ನು ಮೋದಿ ಸರ್ಕಾರ 3 ವರ್ಷದಲ್ಲಿ ಮಾಡಿತು’
ಪಕ್ಷದ 5ನೇ ವರ್ಷಾಚರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ದೆಹಲಿ ಸಿಎಂ ಕೇಜ್ರಿವಾಲ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ: ಪಕ್ಷದ 5ನೇ ವರ್ಷಾಚರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ದೆಹಲಿ ಸಿಎಂ ಕೇಜ್ರಿವಾಲ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ 70 ವರ್ಷಗಳಲ್ಲಿ ಮಾಡಲಾಗದೇ ಇದ್ದಿದ್ದನ್ನು ಮೋದಿ ಸರ್ಕಾರ ಮೂರು ವರ್ಷಗಳಲ್ಲಿ ಸಾಧಿಸಿದೆ ಎಂದು ಟೀಕಿಸಿದ್ದಾರೆ.
ಕೆಲ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಹಿಂದು ಮತ್ತು ಮುಸ್ಲಿಮರು ಹೊಡೆದಾಡಿಕೊಳ್ಳುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ ಸ್ಥಾಪನೆಯಾಗಿ 5 ವರ್ಷ ಪೂರ್ಣಗೊಂಡಿವೆ.
ಸಂಸತ್ತಿನಲ್ಲಿ ಲೋಕಪಾಲ್ ಮಸೂದೆ ಅಂಗೀಕರಿಸಬೇಕು ಎಂದು ಒತ್ತಾಯಿಸಿ ನಡೆದ ಇಂಡಿಯಾ ಅಗೆನಸ್ಟ್ ಕರಪ್ಷನ್ ಹೋರಾಟ ಆಮ್ ಆದ್ಮಿ ಪಕ್ಷದ ಉಗಮಕ್ಕೆ ಕಾರಣವಾಗಿತ್ತು.
ಅರವಿಂದ ಕೇಜ್ರಿವಾಲ್, ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್, ಶಾಂತಿ ಭೂಷಣ್ ನೇತೃತ್ವದಲ್ಲಿ 2012 ನ.26ರಂದು ಆಮ್ ಆದ್ಮಿ ಪಕ್ಷ ಸ್ಥಾಪಿಸಲಾಗಿತ್ತು.
ಈ ಐದು ವರ್ಷಗಳ ಅವಧಿಯಲ್ಲಿ ಪಕ್ಷ ಅನೇಕ ಏಳು ಬೀಳುಗಳನ್ನು ಕಂಡಿದೆ. ಪಕ್ಷ ಸ್ಥಾಪನೆಯಾದ 1 ವರ್ಷ ಒಳಗೇ ಕೇಜ್ರಿವಾಲ್ ದೆಹಲಿ ಅಧಿಕಾರ ಗದ್ದುಗೆ ಹಿಡಿದಿದ್ದರು.
ಕಳೆದ 5 ವರ್ಷಗಳಲ್ಲಿ ಆಪ್ 4 ವಿಧಾನಸಭಾ ಚುನಾವಣೆಯನ್ನು ಎದುರಿಸಿದೆ. 2013 ಮತ್ತು 2015ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಭಾರಿಸಿರುವ ಆಪ್, 2017ರಲ್ಲಿ ಪಂಜಾಬ್ ಮತ್ತು ಗೋವಾ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದೆ.