ನರೇಂದ್ರ ಮೋದಿ ಅವರಿಗೆ ಸಂತ ಪದವಿಯನ್ನು ನೀಡಲು ಸ್ಥಳೀಯ ಸಂಘಟನೆಯೊಂದು ನಿರ್ಧರಿಸಿದೆ. ಆದರೆ ಇದಕ್ಕೆ ವಿರೋಧವು ವ್ಯಕ್ತವಾಗಿದೆ.

ಲಖನೌ: ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿ ಮತ್ತೆ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಅವರಿಗೆ ಸಂತ ಪದವಿಯನ್ನು ನೀಡಲು ಸ್ಥಳೀಯ ಸಂಘಟನೆಯೊಂದರ ಕೆಲ ಸದಸ್ಯರು ನಿರ್ಧರಿಸಿದ್ದಾರೆ. ಮೋದಿ ಲೋಕಸಭೆಗೆ ಆಯ್ಕೆಯಾಗಿರುವ ವಾರಾಣಸಿ (ಕಾಶಿ)ಯಲ್ಲಿರುವ ಕಾಶಿ ವಿದ್ವತ್‌ ಪರಿಷತ್‌ನ 24 ಸದಸ್ಯರ ಪೈಕಿ ಕೆಲ ಸದಸ್ಯರು ಕೈಗೊಂಡಿರುವ ಈ ನಿರ್ಧಾರ ವಿರೋಧಕ್ಕೂ ಕಾರಣವಾಗಿದೆ.

Add Asianetnews Kannada as a Preferred SourcegooglePreferred

ಕಾಶಿಯಲ್ಲಿರುವ ವಿದ್ವತ್‌ ಪರಿಷತ್‌ 4 ರೀತಿಯ ಪದವಿಗಳನ್ನು ನೀಡುತ್ತದೆ. ಅವುಗಳೆಂದರೆ ರಾಷ್ಟ್ರ ಋುಷಿ, ಮಹರ್ಷಿ ಬ್ರಹ್ಮರ್ಷಿ ಮತ್ತು ದೇವಶ್ರೀ. ಈ ಪೈಕಿ ಮೋದಿ ಅವರಿಗೆ ರಾಷ್ಟ್ರ ಋುಷಿ ಅಥವಾ ರಾಜಶ್ರೀ ಪದವಿ ನೀಡುವ ಬಗ್ಗೆ ಸಂಘಟನೆಯ ಕೆಲ ಸದಸ್ಯರು ನಿರ್ಧಾರ ಕೈಗೊಂಡಿದ್ದಾರೆ. ಆದರೆ ಈ ನಿರ್ಣಯಕ್ಕೆ ಪರಿಷದ್‌ನ ಪ್ರಧಾನ ಕಾರ್ಯದರ್ಶಿ ಶಿವಾಜಿ ಉಪಾಧ್ಯಾಯ ಸೇರಿದಂತೆ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೊಂದು ನ್ಯಾಯ ಸಮ್ಮತವಲ್ಲದ ಮತ್ತು ರಾಜಕೀಯ ಪ್ರೇರಿತ ಕ್ರಮ ಎಂದು ವಿದ್ವತ್‌ ಪರಿಷದ್‌ನ ಕೆಲವು ಸದಸ್ಯರು ಆರೋಪಿಸಿದ್ದಾರೆ. ಸೂಕ್ತ ವೇದಿಕೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ. ಇಂತಹ ನಿರ್ಣಯ ಕೈಗೊಳ್ಳಲು ಕೋರಂ ಕರೆಯಬೇಕು. ಆದರೆ, ಕೇವಲ ಇಬ್ಬರು ವ್ಯಕ್ತಿಗಳು ಸಭೆ ಸೇರಿ ಮೋದಿ ಅವರಿಗೆ ಸಂತ ಪದವಿ ನೀಡುವ ನಿರ್ಣಯ ಕೈಗೊಂಡಿದ್ದಾರೆ ಎಂದು ಸಂಘದ ಸದಸ್ಯರು ಆರೋಪಿಸಿದ್ದಾರೆ.

1990ರಲ್ಲಿ ಪ್ರಧಾನಿ ವಿ.ಪಿ.ಸಿಂಗ್‌ ಅವರಿಗೆ ಬ್ರಹ್ಮಶ್ರೀ ಪದವಿ ನೀಡಲಾಗಿತ್ತು. ಆದರೆ ಅವರು ಮಂಡಲ್‌ ಆಯೋಗದ ಶಿಫಾರಸುಗಳನ್ನು ಅಂಗೀಕರಿಸುತ್ತಲೇ ಪದವಿ ಹಿಂಪಡೆಯಲಾಗಿತ್ತು.