ಯುಪಿಎಸ್'ಸಿ ಪರೀಕ್ಷೆ ಫಲಿತಾಂಶ: ಕನ್ನಡತಿ ಕೆ.ಆರ್. ನಂದಿನಿ ಮೊದಲ ರ್ಯಾಂಕ್, ಡಿ.ಕೆ. ರವಿ ಬಳಿ ತರಬೇತಿ
ಕರ್ನಾಟಕದ ಕೆ.ಆರ್. ನಂದಿನಿ ಮೊದಲ ರಾಂಕ್' ಪಡೆದಿದ್ದಾರೆ. ಅನ್ಮೋರ್ ಶೇರ್ ಸಿಂಗ್ 2ನೇ ಹಾಗೂ ಗೋಪಾಲ ಕೃಷ್ಣ ರೋನಂಕಿ ಮೂರನೆ ರಾಂಕ್ ಪಡೆದಿದ್ದಾರೆ. ಇವರು ಕಳೆದ ವರ್ಷ ಪರೀಕ್ಷೆ ಬರೆದಿದ್ದರು.
ನವದೆಹಲಿ(ಮೇ.31): ಕೇಂದ್ರ ಲೋಕಸೇವಾ ಆಯೋಗ (ಯು'ಪಿಎಸ್'ಸಿ ) 2016ನೇ ಸಾಲಿನ ಫಲಿತಾಂಶ ಪ್ರಕಟಿಸಿದ್ದು, ಕರ್ನಾಟಕದ ಕೆ.ಆರ್. ನಂದಿನಿ ಮೊದಲ ರ್ಯಾಂಕ್ ಪಡೆದಿದ್ದಾರೆ.
ಮೂಲತಃ ಕೋಲಾರದ ಕೆಜಿಎಫ್'ನ ರಮೇಶ್ ಎಂಬುವವರ ಪುತ್ರಿಯಾಗಿರುವ ನಂದಿನಿ 2015ರಲ್ಲಿ 625ನೇ ರ್ಯಾಂಕ್ ಪಡೆದು ಭಾರತೀಯ ಕಂದಾಯ ಸೇವೆಗೆ ಆಯ್ಕೆ'ಯಾಗಿ ಫರಿದಾಬಾದ್' ತರಬೇತಿ ಪಡೆಯುತ್ತಿದ್ದರು. ಇವರ ತಂದೆ ಶಿಕ್ಷಕರಾಗಿದ್ದಾರೆ. ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಈ ಸಾಲಿನ ಅಂತಿಮ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಂಡಿದ್ದರು.ಕುತೂಹಲದ ವಿಷಯವೆಂದರೆ ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿದ್ದ ದಿ. ಡಿ.ಕೆ. ರವಿ ಬಳಿ ಕೋಚಿಂಗ್ ಸಹ ಪಡೆದಿದ್ದರು.
17 ವರ್ಷಗಳ ಬಳಿಕ ಕರ್ನಾಟಕಕ್ಕೆ ಯುಪಿಎಸ್ಸಿಯಲ್ಲಿ ಮೊದಲ ರ್ಯಾಂಕ್ನ ಹಿರಿಮೆ ಸಿಕ್ಕಿದೆ. ಈ ಹಿಂದೆ 2000ನೇ ಇಸವಿಯಲ್ಲಿ ವಿಜಯಲಕ್ಷ್ಮೀ ಬಿದರಿ ಅವರು ಮೊದಲ ರ್ಯಾಂಕ್ ಪಡೆದಿದ್ದರು.ಅನ್ಮೋರ್ ಶೇರ್ ಸಿಂಗ್ 2ನೇ ಹಾಗೂ ಗೋಪಾಲ ಕೃಷ್ಣ ರೋನಂಕಿ ಮೂರನೆ ರ್ಯಾಂಕ್ ಪಡೆದಿದ್ದಾರೆ. ಕಲಬುರಗಿಯ ಶೇಖ್ ತನ್ವೀರ್ (25), ಧ್ಯಾನ್'ಚಂದ್ರ ಎಚ್.ಎಂ (47),ಕೆಂಪಹೊನ್ನಯ್ಯ(340),ಎಂ. ಪುನೀತ್ ಕುಟ್ಟಯ್ಯ, ಶ್ರೀನಿಧಿ ಬಿ.ಟಿ,ಸಿರಿವೆನ್ನಲ,ರತನ್ ಬಿ,ಗೋಪಿನಾಥ್,ಮಹಂತೇಶ್ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಉತ್ತೀರ್ಣ'ರಾಗಿದ್ದಾರೆ. ಮೊದಲ ರ್ಯಾಂಕ್ ಬಂದಿರುವ ಕೆ.ಆರ್. ನಂದಿನಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
2016ನೇ ಸಾಲಿನಲ್ಲಿ 1099 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಯುಪಿಎಸ್'ಸಿ ಐಎಎಸ್, ಐಪಿಎಸ್,ಐಎಫ್'ಎಸ್ ಸೇರಿದಂತೆ ವಿವಿಧ ಸೇವೆಗಳಿಗೆ ಪ್ರತಿ ವರ್ಷ ಪರೀಕ್ಷೆ ನಡೆಸುತ್ತದೆ.