ಬೆಂಗಳೂರು (ಸೆ.21): ಕರ್ನಾಟಕದ ಸ್ಥಿತಿಗತಿ ಬಗ್ಗೆ ಅಂಕಿ-ಅಂಶ ಸಮೇತ ಮಾಹಿತಿ ನೀಡಿದರೂ ಅದನ್ನು ಪರಿಗಣಿಸದೇ ಸರ್ವೋಚ್ಚ ನ್ಯಾಯಾಲಯ ಸೆ.27 ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡಲು ಹೇಳಿರುವುದು ಐತಿಹಾಸಿಕ ಬಿಕ್ಕಟ್ಟಿಗೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಈ ಆದೇಶವನ್ನು ಸರ್ಕಾರ ಪಾಲಿಸುವ ಸ್ಥಿತಿಯಲ್ಲಿಲ್ಲ. ಅಣೆಕಟ್ಟುಗಳಲ್ಲಿ ನೀರು ಬರಿದಾಗಿರುವ ಕಾರಣ ನೀರು ಬಿಟ್ಟರೆ ನವೆಂಬರ್ ನಲ್ಲಿ ನೀರಿಲ್ಲದೇ ಪರದಾಡುವ ಹಾಗಾಗುತ್ತದೆ. ಈ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ಅಡ್ವೋಕೇಟ್ ಜನರಲ್ ಮತ್ತು ಸರ್ವಪಕ್ಷ ಸಭೆ ನಡೆಯುತ್ತಿದೆ. ಸಭ ಬಳಿಕ ರಾತ್ರಿ 8 ಗಂಟೆಗೆ ಸುಮಾರಿಗೆ ಸ್ಪಷ್ಟ ನಿರ್ಧಾರ ಸಿಗಬಹುದು.

ಸುಪ್ರೀಂ ತೀರ್ಪು ಪಾಲಿಸದಿದ್ದರೆ?

ನ್ಯಾಯಾಂಗ ನಿಂದನೆಯಾಗಬಹುದು

ರಾಷ್ಟ್ರಪತಿ ಆಡಳಿತಕ್ಕೆ ಕೇಂದ್ರ ಸೂಚನೆ ನೀಡಬಹುದು.

ಕೇಂದ್ರ ಮಧ್ಯಪ್ರವೇಶಿಸಿ ತಮಿಳುನಾಡಿಗೆ ನೀರು ಹಂಚಿಕೆ ಮಾಡುವ ಅವಕಾಶವಿದೆ.

ಅಕ್ಟೋಬರ್ 18 ಕ್ಕೆ ನಡೆಯುವ ಮೂಲ ಅರ್ಜಿಯ ಮೇಲೆ ಪರಿಣಾಮ ಬೀರಬಹುದು

 ತೀರ್ಪು ಪಾಲಿಸಿದರೆ?

ನವೆಂಬರ್ ಅಂತ್ಯದಲ್ಲಿ ಕುಡಿಯುವ ನೀರಿಗೆ ತತ್ವಾರ ಆಗಬಹುದು

ರಾಜ್ಯದ ಜನತೆಯ ಆಕ್ರೋಶಕ್ಕೆ ಕಾರಣವಾಗಬಹುದು

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಶಾಪವಾಗಬಹುದು.

ಸರ್ಕಾರದ ಮುಂದಿರುವ ಹಾದಿ?

ಸುಪ್ರೀಂ ತೀರ್ಪು ವಿರೋಧಿಸಿ ರಾಷ್ಟ್ರಪತಿಗೆ ಮೊರೆ ಹೋಗುವುದು, ಪ್ರಧಾನಿ ಮಧ್ಯಸ್ಥಿಕೆ ಮೂಲಕ ರಾಜ್ಯದ ಪರ ತೀರ್ಪಿಗೆ ಪ್ರಯತ್ನ

ಸಾಂವಿಧಾನಿಕ ಪೀಠದ ಎದುರು ಕ್ಯರೇಟಿವ್ ಅರ್ಜಿ ಸಲ್ಲಿಸಿ ವಿಚಾರಣೆಗೆ ಬರುವಂತೆ ನೋಡಿಕೊಳ್ಳುವುದು

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ವಿರೋಧ ವ್ಯಕ್ತಪಡಿಸುವುದು

ರಾಷ್ಟ್ರಪತಿಗೆ ಮೊರೆ ಹೋಗಬಹುದು

ರಾಜ್ಯದ ಅಣೆಕಟ್ಟುಗಳಲ್ಲಿ ಕುಡಿಯುವ ನೀರು ಪೂರೈಸುವುದಕ್ಕೂ ನೀರಿಲ್ಲ. ಈ ಹಿನ್ನೆಲೆಯಲ್ಲಿ ಕಲಂ 143 ರ ಪ್ರಕಾರ ಇಂತಹ ಬಿಕ್ಕಟ್ಟು ಎದುರಾದಾಗ ಸಿಎಂ ಸ್ವತಃ ರಾಷ್ಟ್ರಪತಿಗೆ ಮೊರೆ ಹೋಗಲು ಅವಕಾಶವಿದೆ. ಆಗ ಅನಿವಾರ್ಯವಾಗಿ ಪ್ರಧಾನಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕಾಗುತ್ತದೆ.